ನಾಗರಹೊಳೆಯಲ್ಲಿ ಹುಲಿದಾಳಿಗೆ ಬಲಿ ಆದ ನವವಿವಾಹಿತ: ಕುಟುಂಬದ ಆಕ್ರಂದನ, ₹50 ಲಕ್ಷ ಪರಿಹಾರಕ್ಕೆ ಒತ್ತಾಯ

ಹುಣಸೂರು: 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಆದಿವಾಸಿ ಯುವಕನ ಮೇಲೆ ದಾಳಿ ನಡೆಸಿದ ಹುಲಿಯು ಆತನನ್ನು ಕೊಂದು ಹಾಕಿದ ಘಟನೆ ನಾಗರಹೊಳೆ ಉದ್ಯಾನದಂಚಿನ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಸೊಳ್ಳೆಪುರದಲ್ಲಿ ಸಂಭವಿಸಿದೆ.
ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್ನ ಕೃಷ್ಣ-ನಾಗವೇಣಿ ದಂಪತಿಯ ಪುತ್ರ ಹರೀಶ್ (29) ಮೃತಪಟ್ಟವರು.
ಆಗಿದ್ದೇನು?
ಹರೀಶ್ ತಂದೆಯೊಂದಿಗೆ ಬೆಳಗ್ಗೆ ಜಮೀನು ಬಳಿಯ ಅರಣ್ಯ ಪ್ರದೇಶದಲ್ಲಿ ಮೇಕೆ ಮೇಯಿಸಲು ತೆರಳಿದ್ದಾನೆ. ತಂದೆ ಕೃಷ್ಣ ಅರಣ್ಯದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೇಕೆ ಮೇಯಿಸುತ್ತಿದ್ದ ಹರೀಶ್ ಮೇಲೆ ಒಮ್ಮೆಲೆ ಹುಲಿ ದಾಳಿ ನಡೆಸಿದೆ. ಹರೀಶ್ ಕಿರುಚಿದಾಗ ತಂದೆ ಕೃಷ್ಣ ಧಾವಿಸಿ ಬಂದು ಹುಲಿಯ ಬೆದರಿಸಿ ಓಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಹರೀಶ್ ಸಾಕಷ್ಟು ರಕ್ತ ಸ್ರಾವದಿಂದ ಅಸ್ವಸ್ಥಗೊಂಡಿದ್ದ ಆತನ ಹುಣಸೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು.
ಆಸ್ಪತ್ರೆಗೆ ನಾಗರಹೊಳೆ ಉದ್ಯಾನದ ಮುಖ್ಯಸ್ಥೆ ಪಿ.ಎ.ಸೀಮಾ, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಫಯಾಜುದ್ದೀನ್, ಆರ್.ಎಫ್.ಒ ನಂದಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ವ್ಯವಸ್ಥಾಪಕಿ ಪುಷ್ಪಾ, ಆಶ್ರಮ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ್ ಭೇಟಿ ನೀಡಿ, ಕುಟುಂಬದವರ ಸಂತೈಸಿದರು.
20 ಲಕ್ಷ ರೂ. ಪರಿಹಾರ ಘೋಷಣೆ, ಹುಲಿ ಸೆರೆಗಾಗಿ ಕೂಂಬಿಂಗ್ ಶುರು:
ಹುಲಿ ದಾಳಿಗೆ ಒಳಗಾಗಿ ಮೃತಪಟ್ಟ ನವವಿವಾಹಿತ ಹರೀಶ್ ಕುಟುಂಬಕ್ಕೆ ಟೈಗರ್ ಫೌಂಡೇಶನ್ ವತಿಯಿಂದ ತಕ್ಷಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲಾಗುವುದು. ಬಳಿಕ 15 ಲಕ್ಷ ರೂ. ಚೆಕ್ ನೀಡಲಾಗುವುದು. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಲು ಆದೇಶಿಸಲಾಗಿದೆ ಡಿಸಿಎಫ್ ಸೀಮಾ ತಿಳಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ; 50ಲಕ್ಷ ರೂ. ಪರಿಹಾರ, ಉದ್ಯೋಗಕ್ಕೆ ಒತ್ತಾಯ:
ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬ ಪುತ್ರನ ಕಳೆದುಕೊಂಡ ತಂದೆ-ತಾಯಿ, ಪತ್ನಿ ರಶ್ಮಿತಾ, ಕುಟುಂಬದವರು ಹಾಗೂ ಆತನ ಸ್ನೇಹಿತರ ಆಕ್ರಂದನ ಹೇಳ ತೀರದಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಕೊಡಗಿನ ಬಾಳೆಲೆ ಬಳಿಯ ಕುಮಾರಕಟ್ಟೆ ಹಾಡಿಯ ರಶ್ಮಿತಾಳ ಹರೀಶ ವಿವಾಹವಾಗಿದ್ದ, ಈಗ ಪತಿಯ ಸಾವಿನಿಂದ ರಶ್ಮಿತಾ ಆಘಾತಕ್ಕೊಳಗಾಗಿದ್ದಾರೆ. ಕುಟುಂಬದ ಆಧಾರ ಸ್ತಂಭವಾಗಿದ್ದ ಮೃತ ಹರೀಶ್ ಕುಟುಂಬಕ್ಕೆ 50ಲಕ್ಷ ರೂ. ಪರಿಹಾರ ಹಾಗೂ ಕುಟುಂಬಕ್ಕೆ ಉದ್ಯೋಗ ನೀಡಲು ಗುರುಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.