ರೇಷನ್ ಕಾರ್ಡ್ ಪಡಿತರಿಗೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ

ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ನ್ಯೂಸ್ ನೀಡಲಾಗಿದೆ. ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿತ್ತು. ಅದರಲ್ಲಿ ಇದೀಗ ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ನ್ಯೂಸ್ ನೀಡಲಾಗಿದೆ.

ಪಡಿತರಿಗೆ ನೀಡುವ ಅಕ್ಕಿಗೆ ಬದಲಾಗಿ ಪರ್ಯಾಯ ವಸ್ತುವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ. ಆದರೆ, ಇದು ಕರ್ನಾಟಕದ ಎಲ್ಲಾ ಪ್ರದೇಶಕ್ಕೂ ಅನ್ವಯಿಸುವುದಿಲ್ಲ.
ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಜನರಿಗೆ ಅದರಲ್ಲೂ ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ನ್ಯೂಸ್ ನೀಡುವುದಕ್ಕೆ ಮುಂದಾಗಿದೆ. ಉತ್ತರ ಕರ್ನಾಟಕದ ಪಡಿತರಿಗೆ ಜೋಳ ಕೊಡುವ ಪ್ರಸ್ತಾವನೆ ಇದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಕ್ಕಿ ಹೆಚ್ಚು ಉಪಯೋಗಿಸದ ಪ್ರದೇಶದಲ್ಲಿ ಮೂರು ಕೆ.ಜಿ. ಜೋಳ ಕೊಡುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಬಡವರು ಉಪವಾಸದಿಂದ ಇರಬಾರದು ಎಂದು ರಾಜ್ಯ ಸರ್ಕಾರ ನಾನಾ ಯೋಜನೆಯನ್ನು ರೂಪಿಸಿದೆ. ಬಡವರಿಗೆ ದವಸ ಧಾನ್ಯಗಳನ್ನು ನೀಡಬೇಕು ಹಾಗೂ ನರೇಗಾ ಯೋಜನೆಯಲ್ಲಿ ಉದ್ಯೋಗ ಕೊಡಬೇಕು ಎಂಬುದು ನಮ್ಮ ಮುಖ್ಯ ಯೋಜನೆ ಆಗಿದೆ ಎಂದು ಅವರು ಹೇಳಿದ್ದಾರೆ.
ಮುಂದುವರಿದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಈಗಾಗಲೇ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಹ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಒಮ್ಮತದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ನಮಗೆ ಮೊದಲು ದೇಶ ಮುಖ್ಯ. ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪಾಕಿಸ್ತಾನದವರು ಪ್ರಚೋದನೆ ಕೊಡುವ ಕೆಲಸ ಮಾಡಿದ್ದು ಖಂಡನೀಯ ಎಂದರು.
ದೇಶದಲ್ಲಿ ಇಂಥ ಘಟನೆಗಳು ಆಗಬಾರದು. ಇಂಥ ಘಟನೆಯಾದಾಗ ಖಂಡಿಸಬೇಕಿತ್ತು. ಇದನ್ನು ಖಂಡಿಸಿರುವ ಕೇಂದ್ರ ಸರಕಾರ ಭಯೋತ್ಪಾದಕರ ಮೇಲೆ ಕ್ರಮ ಜರುಗಿಸಬೇಕು.ಸಿಎಂ ಯುದ್ಧ ಬೇಡ ಎಂಬುದರ ಹೇಳಿಕೆಗೆ ಅವರೇ ನಿನ್ನೆ ಉತ್ತರ ಕೊಟ್ಟಿದ್ದಾರೆ. ಇದರಲ್ಲಿ ರಾಜಕೀಯ ಮಾಡಬಾರದು. ಅದು ಯಾವುದೇ ಪಕ್ಷ ಇರಲಿ ಎಂದರು.
ಕೇಂದ್ರ ಸರಕಾರದ ಬೆಲೆ ಏರಿಕೆಯ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರ ಎಲ್ಲದರ ಮೇಲೂ ಬೆಲೆ ಏರಿಕೆ ಮಾಡಿದೆ. ಇದರ ಅವಶ್ಯಕತೆ ಏನಿದೆ. ಇದರ ಹಣ ಎಲ್ಲಿ ಹೋಗುತ್ತಿದೆ ಎಂದು ಕಾರಣ ಕೊಡಬೇಕು. ರಾಷ್ಟ್ರದ ಹಿತ ದೃಷ್ಟಿಯಿಂದ ಬೆಲೆ ಏರಿಕೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
