ಜಿಎಸ್ಟಿ ಹೊಸ ದರ ಜಾರಿ: ಕೆಎಂಎಫ್ ಉತ್ಪನ್ನಗಳ ಬೆಲೆ ಇಳಿಕೆ, ಹಳೆಯ ದರದಲ್ಲಿ ಮಾರಿದರೆ ಕ್ರಮ

ಬೆಂಗಳೂರು: ಜಿಎಸ್ಟಿ ಹೊಸ ದರ ಜಾರಿಯಾದ ನಂತರವೂ ಕೆಎಂಎಫ್ ಉತ್ಪನ್ನಗಳನ್ನು ಗ್ರಾಹಕರಿಗೆ ಹಳೆಯ ದರದಲ್ಲೇ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಹಾಲು ಮೊಸಲು ಹೊರಟು ಪಡಿಸಿ ಉಳಿದ ಉತ್ಪನ್ನ ಬೆಲೆ ಇಳಿಕೆ ಯಾಗಿದೆ. ಕೆಎಮ್ ಎಫ್ ಯಥಾವತ್ತಾಗಿ ಬೆಲೆ ಕಡಿಮೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಸೂಚನೆ ನೀಡಿದೆಯೋ, ಅದೇ ಪ್ರಕಾರವಾಗಿ ಮಾರಾಟ ಮಾಡುತ್ತಿದ್ದೇವೆ. ಜಿಎಸ್ಟಿ ದರ ಕಡಿಮೆಯಾಗಿರುವುದರಿಂದ ಉತ್ಪನ್ನಗಳ ಬೆಲೆ ಸಹ ಇಳಿಕೆ ಆಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಜವಾಬ್ದಾರಿಯನ್ನು ಕೆಎಂಎಫ್ ಹೊತ್ತುಕೊಂಡಿದೆ. ಯಾವುದಾದರೂ ದೂರು ಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಎಂಆರ್ಪಿ ಏನೇ ಇರಲಿ, ನಾವು ಜಿಎಸ್ಟಿ ಕಡಿತಗೊಂಡ ದರದ ಆಧಾರದ ಮೇಲೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಮೆರಿಕದಲ್ಲಿ ಕೆಎಂಎಫ್ ಘಟಕ ಲಾಂಚ್
ವಿದೇಶಗಳಲ್ಲಿ ಕೆಎಂಎಫ್ ಉತ್ಪನ್ನಗಳಿಗೆ ಬಹು ಬೇಡಿಕೆ ಇರುವುದನ್ನು ಉಲ್ಲೇಖಿಸಿದ ಶಿವಸ್ವಾಮಿ, ಅಮೆರಿಕದ ನಾವಿಕ ಸಮ್ಮೇಳನದಲ್ಲಿ ಕೆಎಂಎಫ್ ಉತ್ಪನ್ನಗಳ ಲಾಂಚ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಅಮೆರಿಕದಲ್ಲಿ ನಮ್ಮ ಉತ್ಪನ್ನಗಳಿಗೆ ಅಪಾರ ಪ್ರತಿಕ್ರಿಯೆ ಬಂದಿದೆ. ಉತ್ತಮ ಗುಣಮಟ್ಟ ಇರುವ ಕಾರಣದಿಂದಲೇ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮುಂದೆ ಸಕ್ಕರೆ ಅಂಶ ಕಡಿಮೆ ಇರುವ ಹೊಸ ಉತ್ಪನ್ನಗಳನ್ನೂ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ ಎಂದು ವಿವರಿಸಿದರು.
ರಾಜ್ಯದ ವಿವಿಧೆಡೆ ಹೊಸ ಬ್ರಾಂಚ್ಗಳು
ರಾಜ್ಯದಲ್ಲಿ ವಿಸ್ತರಣೆ ಕಾರ್ಯ ಕೂಡ ವೇಗವಾಗಿ ನಡೆಯುತ್ತಿರುವುದನ್ನು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಕಲಬುರಗಿ ಭಾಗದಲ್ಲಿ ಹೊಸ ಕೆಎಂಎಫ್ ಬ್ರಾಂಚ್ ಉದ್ಘಾಟಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಘಟಕಗಳನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಹೇಳಿದರು.
ತಿರುಪತಿಗೆ ತುಪ್ಪ ಸರಬರಾಜು
ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವ ವಿಷಯದಲ್ಲಿಯೂ ಸ್ಪಷ್ಟನೆ ನೀಡಿದ ಶಿವಸ್ವಾಮಿ, ಇದುವರೆಗೆ 5 ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಸರಬರಾಜು ಮಾಡಿದ್ದೇವೆ. ಮುಂದೆಯೂ ಇನ್ನಷ್ಟು ಬೇಡಿಕೆ ಇದ್ದರೆ ತುಪ್ಪ ಸರಬರಾಜು ಮಾಡಲು ನಾವು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.