ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಲಕ್ಷ್ಯ-ತಮಿಳುನಾಡು ಪಾಲಾಗುತ್ತಾ?

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆ ಆಗುತ್ತಿದೆ. ಪದೇ ಪದೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದರೂ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ.

ಬೆಂಗಳೂರಿನಲ್ಲಿ ಐದಕ್ಕೂ ಹೆಚ್ಚು ಸ್ಥಳಗಳ ಕೇಂದ್ರ ತಂಡ ಪರಿಶೀಲನೆಯನ್ನು ಮಾಡಿದೆ. ಆದರೆ ಯಾವುದೇ ಬದಲಾವಣೆ ಅಥವಾ ಪ್ರಗತಿ ಆಗುತ್ತಿಲ್ಲ. ಇದೀಗ ತಮಿಳುನಾಡು ಮಾತ್ರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ಸಿದ್ಧತೆ ಮಾಡಿಕೊಂಡಿದ್ದು. ಭೂಸ್ವಾಧೀನಕ್ಕೆ ಮುಂದಾಗಿದೆ. ಇದಕ್ಕೆ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡು ಸರ್ಕಾರವು ಬೆಂಗಳೂರಿಗೆ ಪೈಪೋಟಿ ಕೊಡುವ ಉದ್ದೇಶದಿಂದ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದೆ. ಅದೆಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ, ಕೇಂದ್ರ ಸರ್ಕಾರ ಈಗಾಗಲೇ ತಮಿಳುನಾಡು ಗುರುತಿಸಿದ ಎರಡೂ ಪ್ರದೇಶದಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ಅನುಮತಿ ನೀಡಿದೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯ ಇದೀಗ ಅಭಿಯಾನ ಸ್ವರೂಪವನ್ನು ಪಡೆದುಕೊಂಡಿದೆ.
ಸಿ.ಎಸ್ ಲಕ್ಷ್ಮೇಶ ಎನ್ನುವವರು, ಕರುನಾಡ ರಾಜಕಾರಣಿಗಳು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಜಾಗದ ಬಗ್ಗೆ ಕಿತ್ತಾಡಿಕೊಂಡು ತಮಿಳುನಾಡಿಗೆ ಮುನ್ನಡೆಯನ್ನು ಕೊಟ್ಟಿದ್ದಾರೆ. ಇನ್ನು ಬೆಂಗಳೂರಿನ ಯಾವ ಕಂಪನಿಗಳು ಮತ್ತು ಹೊಸದಾಗಿ ಬರಬೇಕಿದ್ದವು ಹೊಸೂರಿಗೆ ಹೋಗುತ್ತವೆ ಎಂದು ಲೆಕ್ಕ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲೇ ಪೈಪೋಟಿ: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲೇ ಸಚಿವರ ನಡುವೆ ಪೈಪೋಟಿ ಎದುರಾಗಿದೆ. ಸಚಿವ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರ ನಡುವೆ ತೀವ್ರ ಪೈಪೋಟಿ ಇದೆ. ಅಲ್ಲದೇ ಹಲವು ಸಚಿವರು ಈ ವಿಚಾರವಾಗಿ ತೆರೆಮರೆಯ ಕಸರತ್ತು ಮುಂದುವರಿಸಿದ್ದಾರೆ. ಇದರ ಪರಿಣಾಮವೂ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕ್ರಿಯೆಯು ವಿಳಂಬವಾಗುತ್ತಲ್ಲೇ ಇದೆ.
ಇದರ ನಡುವೆ ಕೇಂದ್ರ ಸರ್ಕಾರವೂ ಪೂರ್ಣ ಸಹಕಾರ ನೀಡುತ್ತಿಲ್ಲ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಕೇಂದ್ರ ಸರ್ಕಾರ ಹಾಗೂ ವಿಮಾನಯಾನ ಸಂಸ್ಥೆ ಹೇಳಿತ್ತು. ಅದರಂತೆ ಸ್ಥಳ ಪರಿಶೀಲನೆಯನ್ನೂ ಮಾಡಲಾಗಿದೆ. ಆದರೆ, ಸ್ಥಳ ಪರಿಶೀಲನೆ ಮಾಡಿದ ನಂತರವೂ ಮೂರು ತಿಂಗಳಾದರೂ ಅನುಮತಿ ನೀಡಿಲ್ಲ. ಈಗಾಗಲೇ ಸ್ಥಳ ಪರಿಶೀಲನೆ ಮಾಡಿರುವ ಪ್ರದೇಶಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಗ್ಯವಲ್ಲ ಅಥವಾ ಸೂಕ್ತ ಪ್ರದೇಶ ಅಲ್ಲ ಎಂದಾದರೆ ಹೊಸ ಪ್ರದೇಶ ಶಿಫಾರಸ್ಸು ಮಾಡುವಂತಾದರೂ ಕೇಂದ್ರ ತಂಡ ಹೇಳಬೇಕಿತ್ತು.