ಸಿಎಂ ಸಿದ್ದರಾಮಯ್ಯ ತವರಿನಲ್ಲೇ ದಲಿತ ಸಿಎಂ ಕೂಗು: “ನನ್ನ ನಂತರ ದಲಿತರೇ ಮುಖ್ಯಮಂತ್ರಿ” ಎಂದು ಘೋಷಿಸುವಂತೆ ಸ್ವಾಮೀಜಿಗಳ ಪಟ್ಟು!

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇದೀಗ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತ ಸಮುದಾಯದ ನಾಯಕರು ಮತ್ತು ಸ್ವಾಮೀಜಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸಮಾಜದ ಪ್ರಮುಖರ ಸಭೆಯಲ್ಲಿ, ಸಿದ್ದರಾಮಯ್ಯ ಅವರು ಒಂದು ವೇಳೆ ಅಧಿಕಾರದಿಂದ ಕೆಳಗಿಳಿದರೆ ಅವರ ಸ್ಥಾನಕ್ಕೆ ದಲಿತ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಒಕ್ಕೊರಲ ಒತ್ತಾಯ ಕೇಳಿಬಂದಿದೆ.


ಸಭೆಯಲ್ಲಿ ಮಾತನಾಡಿದ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, “ನನ್ನ ನಂತರ ದಲಿತರೇ ಸಿಎಂ” ಎಂದು ಸಿದ್ದರಾಮಯ್ಯ ಘೋಷಿಸಿದರೆ ಅವರು ದೇವರಾಜ ಅರಸು ಅವರಿಗಿಂತ ದೊಡ್ಡ ನಾಯಕರಾಗಿ ಇತಿಹಾಸದಲ್ಲಿ ಉಳಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ್ ಅವರಂತಹ ಹಿರಿಯ ನಾಯಕರಿಗೆ ಅನ್ಯಾಯವಾಗಬಾರದು ಎಂದು ಪ್ರತಿಪಾದಿಸಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ನಮ್ಮ ಅಭ್ಯಂತರವಿಲ್ಲ, ಆದರೆ ಅದಕ್ಕಿಂತ ಮೊದಲು ದಲಿತರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. 75 ವರ್ಷಗಳಿಂದ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿರುವ ದಲಿತ ಸಮುದಾಯದ ಬೇಡಿಕೆ ಈಡೇರದಿದ್ದರೆ, ಉಳಿದಿರುವ ಶೇ.30ರಷ್ಟು ಮತದಾರರು ಕೂಡ ಪಕ್ಷದಿಂದ ದೂರವಾಗಲಿದ್ದಾರೆ ಎಂಬ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಲಾಯಿತು.
