ಮೈಸೂರು ‘ದಕ್ಷಿಣ ಅಯೋಧ್ಯೆ’ ವಿವಾದ: ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧ, ದಲಿತ ಸಂಘಟನೆಗಳಿಂದ ಪ್ರತಿಭಟನೆ

ಮೈಸೂರು: ಅಯೋಧ್ಯೆ ವಿವಾದದ ಬಳಿಕ ಇದೀಗ ಮೈಸೂರಿನಲ್ಲಿ ಮತ್ತೆ ವಿವಾದ ಶುರುವಾಗಿದೆ. ಅಯೋಧ್ಯೆ ರಾಮನನ್ನು ಕೆತ್ತಲು ಬಳಸಿದ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಜಮೀನು ಮಾಲೀಕ ಮುಂದಾಗಿದ್ದಾರೆ. ಆದರೆ ದಲಿತ ಸಂಘಟನೆಗಳನ್ನು ಶಾಲೆ ಕಟ್ಟುತ್ತೇವೆ ಹೊರತಾಗಿ ಮಂದಿರಕ್ಕೆ ಅವಕಾಶ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮದಾಸ್ ಎಂಬುವವರು ಜಮೀನಿನಲ್ಲಿ ಸಿಕ್ಕಿದ್ದ ಕಪ್ಪುಶಿಲೆಯನ್ನು ಬಳಸಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಲಾಗಿತ್ತು. ಇದೀಗ ಜಮೀನು ಮಾಲೀಕ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಮುಂದಾಗಿದ್ದು, ಇಂದು ದಕ್ಷಿಣ ಅಯೋಧ್ಯೆ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆದರೆ ದಲಿತ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಮಮಂದಿರ ಕಟ್ಟಲು ಬಿಡುವುದಿಲ್ಲ. ಇಲ್ಲಿ ಶಾಲೆ ಕಟ್ಟುತ್ತೇವೆ ಎಂದಿದ್ದಾರೆ. ಬಾಲರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ಕಾರ್ಯಕರ್ತರು ಬಾವುಟಗಳನ್ನ ನೆಟ್ಟು, ಶಂಕುಸ್ಥಾಪನೆಗೆ ಹಾಕಿದ ಚಪ್ಪರದ ಸುತ್ತ ಬಾವುಟಗಳನ್ನ ಕಟ್ಟಿ ಹೋರಾಟ ನಡೆಸಿದ್ದಾರೆ. ದಿಢೀರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಮೀನು ಮಾಲೀಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ರಾಮಮಂದಿರ ಕಟ್ಟೇ ಕಟ್ಟುತ್ತೇನೆ. ಮಂದಿರ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೆ. ಹೀಗಾಗಿ ಅದನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನ ಜಮೀನು. ದೇವಸ್ಥಾನ ಕಟ್ಟುವುದು, ಬಿಡುವುದು ನನ್ನ ನಿರ್ಧಾರ. ಇದಕ್ಕೆ ಯಾರ ಒಪ್ಪಿಗೆಯೂ ಬೇಡ. ಕೆಲ ಸಂಘಟನೆಗಳು ರಾಮ ಮಂದಿರಕ್ಕೆ ವಿರೋಧ ಮಾಡಿದ್ದಾರೆ. ಅವರಿಂದ ಸಮಾರಂಭಕ್ಕೆ ಬರುವ ಗಣ್ಯರಿಗೆ ಮುಜುಗರ ಆಗುತ್ತದೆ ಎಂದು ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.