ಮೈಸೂರು: ಪ್ರೀತಿ ನಿರಾಕರಿಸಿದ ಯುವತಿಗೆ ಕಿರುಕುಳ, ಯುವಕನ ವಿರುದ್ಧ ಪ್ರಕರಣ ದಾಖಲು

ಮೈಸೂರು: ಪ್ರೀತ್ಸೇ ಪ್ರೀತ್ಸೆ ಎಂದು ದುಂಬಾಲು ಬಿದ್ದ ಯುವಕ ಯುವತಿಗೆ ಕಿರುಕುಳ ನೀಡಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನೊಂದ ಯುವತಿ ರಕ್ಷಣೆ ಕೋರಿ ಪ್ರಕರಣ ದಾಖಲಿಸಿದ್ದಾಳೆ. ರವಿಕಿರಣ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಬೋಗಾದಿ ನಿರ್ಮಿತಿ ಕೇಂದ್ರದ ಬಳಿ ವಾಸವಿರುವ ಯುವತಿಗೆ ಕೆಲಸ ಕೊಡಿಸುವುದಾಗಿ ರವಿಕಿರಣ್ ಪರಿಚಯ ಮಾಡಿಕೊಂಡಿದ್ದಾನೆ.ಇಬ್ಬರು ಸಾಕಷ್ಟು ಬಾರಿ ಕೆಲಸದ ಬಗ್ಗೆ ಮಾತನಾಡಿದ್ದಾರೆ.ಅಲ್ಲದೆ ಇಬ್ಬರೂ ಸಹ ಸೆಲ್ಫೀ ಫೋಟೋಗಳನ್ನ ತೆಗೆದುಕೊಂಡಿದ್ದಾರೆ.ನಂತರ ತನ್ನನ್ನ ಪ್ರೀತಿಸುವಂತೆ ರವಿಕಿರಣ್ ಹಿಂದೆ ಬಿದ್ದಿದ್ದಾನೆ.
ಪ್ರೀತಿಯನ್ನ ನಿರಾಕರಿಸಿದಾಗ ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾನೆ.ಈ ಹಿಂದೆ ಈತನ ವಿರುದ್ದ ಯುವತಿ ಪ್ರಕರಣ ಸಹ ದಾಖಲಿಸಿದ್ದಾಳೆ.ಹೀಗಿದ್ದರೂ ಬೆನ್ನಿಗೆ ಬಿದ್ದ ಬೇತಾಳನಂತೆ ಮತ್ತೆ ಪ್ರೀತಿಸುವಂತೆ ಪಟ್ಟುಹಿಡಿದಿದ್ದಾನೆ.ತನ್ನ ಮನೆ ಬಳಿ ಹೋಗುತ್ತಿದ್ದ ಯುವತಿಯನ್ನ ಅಡ್ಡಗಟ್ಟಿ ಪ್ರೀತಿಸುವಂತರ ಕ್ಯಾತೆ ತೆಗೆದಿದ್ದಾನೆ.
ಸಾರ್ವಜನಿಕವಾಗಿ ಬಟ್ಟೆ ಹಿಡಿದು ಎಳೆದಾಡಿದ್ದಾನೆ.ರಕ್ಷಣೆ ಕೋರಿ ತನ್ನ ತಮ್ಮನನ್ನ ಯುವತಿ ಕರೆಸಿಕೊಂಡಿದ್ದಾಳೆ.ರಕ್ಷಣೆಗೆ ಬಂದ ತಮ್ಮನಿಗೆ ರವಿಕಿರಣ್ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.ಈ ವೇಳೆ ಸಾರ್ವಜನಿಕರು ಬಂದಾಗ ರವಿಕಿರಣ್ ಓಡಿಹೋಗಿದ್ದಾನೆ.ರವಿಕಿರಣ್ ನಿಂದ ರಕ್ಷಣೆ ಕೋರಿ ಯುವತಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.