ಮಾನವೀಯತೆ ಮೆರೆದ ಮುಸ್ಲಿಂ ಭಕ್ತ: ಪ್ರೇಮಾನಂದ ಮಹಾರಾಜ್ ಶೀಘ್ರ ಗುಣಮುಖರಾಗಲು ಮದೀನಾದ ಪವಿತ್ರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ; ವಿಡಿಯೋ ವೈರಲ್

ಪ್ರೇಮಾನಂದ ಮಹಾರಾಜ್ ಭಾರತದ ಒಬ್ಬ ಪ್ರಸಿದ್ಧ ಆಧ್ಯಾತ್ಮಿಕ ಧರ್ಮ ಗುರು. ದೇಶದ ಮೂಲೆ ಮೂಲೆಗಳಲ್ಲೂ ಇವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಪ್ರಸ್ತುತ ಇವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಆರೋಗ್ಯ ಚೇತರಿಕೆಗಾಗಿ ಜಾತಿ, ಧರ್ಮದ ಬೇಧವಿಲ್ಲದೆ ಭಕ್ತರು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಮುಸ್ಲಿಂ ವ್ಯಕ್ತಿ ಪ್ರೇಮಾನಂದ ಮಹಾರಾಜ್ ಅವರಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಈ ವಿಷಯ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೊಬ್ಬ ಮುಸ್ಲಿಂ ವ್ಯಕ್ತಿ ಪ್ರೇಮಾನಂದ ಮಹಾರಾಜ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಮದೀನಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಪ್ರೇಮಾನಂದ ಮಹಾರಾಜ್ಗಾಗಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ವ್ಯಕ್ತಿ:
ವರದಿಗಳ ಪ್ರಕಾರ, ಪ್ರೇಮಾನಂದ ಮಹಾರಾಜ್ ಅವರು ಸದ್ಯ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಸುಸ್ಲಿಂ ವ್ಯಕ್ತಿಯೊಬ್ಬರು ಇಸ್ಲಾಂನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಮದೀನಾದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಹೌದು ಪ್ರಯಾಗರಾಜ್ನ ಸೂಫಿಯಾನ್ ಅಲಹಾಬಾದ್ ಎಂಬವರು ಪ್ರೇಮಾನಂದ ಮಹಾರಾಜ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಮದೀನಾದ ಅತ್ಯಂತ ಪವಿತ್ರ ಮಸೀದಿಗಳಲ್ಲಿ ಒಂದಾದ ಮಸೀದ್-ಎ-ನಬವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತ ವಿಡಿಯೋವನ್ನು Waseem Zaidi ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ, ಸುಫಿಯಾನ್, “ಇವರು ನಮ್ಮ ಪ್ರೇಮಾನಂದ ಮಹಾರಾಜ್ ಜಿ. ಭಾರತದ ತುಂಬಾ ಒಳ್ಳೆಯ ವ್ಯಕ್ತಿ. ನಾನು ಪ್ರಸ್ತುತ ಗುಂಬಾದ್-ಎ-ಖಿಜ್ರಾದಲ್ಲಿದ್ದೇನೆ. ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆದ್ದರಿಂದ, ಅವರು ಸಾಧ್ಯವಾದಷ್ಟು ಬೇಗ ಗುಣಮುಖರಾಗಲಿ, ಅಲ್ಲಾಹನು ಅವರಿಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದು ನಾನು ಇಲ್ಲಿಂದ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳುವುದನ್ನು ಕೇಳಬಹುದು.
ಪ್ರಯಾಗ್ರಾಜ್ನ ಪ್ರತಾಪ್ಪುರದ ಸೂಫಿಯಾನ್ ಅಲಹಾಬಾದ್, ಸೌದಿ ಅರೇಬಿಯಾದ ಮದೀನಾದಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೇಮಾನಂದ ಮಹಾರಾಜರ ಆಲೋಚನೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದ ಅವರು, ಆಗಾಗ್ಗೆ ಪ್ರೇಮಾನಂದ ಮಹಾರಾಜರ ಧರ್ಮೋಪದೇಶಗಳನ್ನು ಕೇಳುತ್ತಿದ್ದರು. ಪ್ರೇಮಾನಂದರ ಅನಾರೋಗ್ಯದ ಬಗ್ಗೆ ಇಂಟರ್ನೆಟ್ ಮೂಲಕ ತಿಳಿದಾಗ, ಆದಷ್ಟು ಬೇಗ ಗುರುಗಳು ಗುಣಮುಖರಾಗಲಿ ಎಂದು ಮದೀನಾದ ಪವಿತ್ರ ಮಸೀದಿಗಳಲ್ಲಿ ಒಂದಾದ ಮಸೀದ್-ಎ-ನಬವಿಯಲ್ಲಿ ಪ್ರೇಮಾನಂದರ ಫೋಟೋವನ್ನು ತಮ್ಮ ಮೊಬೈಲ್ ಫೋನ್ನಲ್ಲಿ ಇರಿಸಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಅಕ್ಟೋಬರ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನನ್ನ ಕನಸಿನ ಭಾರತʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಅದ್ಭುತ ವ್ಯಕ್ತಿ ಮಾತ್ರವಲ್ಲ ನಿಜವಾದ ಭಾರತೀಯ, ನಿನಗೂ ದೇವರು ಒಳ್ಳೆಯದು ಮಾಡಲಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಭಾರತದಲ್ಲಿ ಹೀಗೆಯೇ ಶಾಂತಿ, ಸಹೋದರತೆ, ಸಾಮರಸ್ಯ ಇರಲಿʼ ಎಂದು ಹೇಳಿದ್ದಾರೆ.