ಸಿಡಿಲು ಬಡಿದು ಸಾವಾಗಿದ್ದ ಮಹಿಳೆಯಲ್ಲಿ ಕೊಲೆಯ ಶಂಕೆ

ಹುಬ್ಬಳ್ಳಿ:ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ಬುಧವಾರ (ಏ.24) ನಡೆದಿದೆ. ಆದರೆ ಮಹಿಳೆಯ ತವರು ಮನೆಯವರು ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಕುಂದಗೋಳ ಪಟ್ಟಣದ ಗಂಗಾಧರೇಶ್ವರ ಗುಡಿ ಓಣಿ ನಿವಾಸಿ ಪುಷ್ಪಾ ರಮೇಶ ಬೀಳೆಬಾಳ (35) ಮೃತಪಟ್ಟವರು.
ಇವರು ಬುಧವಾರ ತವರುಮನೆಯಿಂದ ಬೆನ್ನೂರು ಗ್ರಾಮದ ಸಂಬಂಧಿಕರ ಮದುವೆಗೆ ಹೋಗಿ, ನಂತರ ಇಂಗಳಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರಂತೆ. ಆನಂತರ ಮರಳಿ ತವರು ಮನೆಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿಳೆಯ ತವರು ಮನೆಯವರು ಇದು ಕೊಲೆ ನಡೆದಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.