₹1000 ಸಾಲಕ್ಕಾಗಿ ನಡೆದ ಕೊಲೆ: ಅಪರಾಧಿಗೆ 7 ವರ್ಷ ಜೈಲು ಹಾಗೂ ದಂಡ

ರಾಯಚೂರು : ಸಾವಿರ ರೂಪಾಯಿ ಸಾಲ ವಾಪಸ್ ಕೇಳಿದ್ದಕ್ಕೆ ನಡೆದಿದ್ದ ಕೊಲೆಗೆ ಸಂಬಂಧಿಸಿದಂತೆ ಪ್ರಕರಣದ ಅಪರಾಧಿಗೆ ಶಿಕ್ಷೆ ವಿಧಿಸಿ ರಾಯಚೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿ ಪರಶುರಾಮಗೆ 7 ವರ್ಷ ಕಠಿಣ ಶಿಕ್ಷೆ, 1 ಲಕ್ಷದ 30 ಸಾವಿರ ರೂ. ದಂಡ ವಿಧಿಸಿದೆ. ರಾಯಚೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು.
ಪ್ರಕರಣ ಹಿನ್ನೆಲೆ : 2020 ರಲ್ಲಿ ಶೇಖರ್ ಎನ್ನುವ ವ್ಯಕ್ತಿಯ ಕೊಲೆಯಾಗಿತ್ತು. ಪರಶುರಾಮ ಶೇಖರ್ ಹತ್ತಿರ 3 ಸಾವಿರ ರೂಪಾಯಿ ಸಾಲ ಪಡೆದಿದ್ದ. 2 ಸಾವಿರ ರೂಪಾಯಿ ಹಿಂದುರಿಗಿಸಿ, ಒಂದು ಸಾವಿರ ರೂಪಾಯಿ ವಾಪಸ್ ಕೊಡುವುದು ಬಾಕಿ ಉಳಿದಿತ್ತು. ಶೇಖರ್ ಆ ಒಂದು ಸಾವಿರ ರೂಪಾಯಿಯನ್ನ ಪದೇ ಪದೇ ಕೇಳುತ್ತಿದ್ದಾನೆ ಅಂತ ದ್ವೇಷದಿಂದ ಹಲ್ಲೆ ಮಾಡಿದ್ದ. ಶೇಖರ್ ಮನೆ ಮುಂದೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ಪಟ್ಟಿಯಿಂದ ಹಲ್ಲೆ ಮಾಡಿದ್ದ. ಗಾಯಗೊಂಡ ಶೇಖರ್ ಸಾವನ್ನಪ್ಪಿದ್ದ ಹಿನ್ನೆಲೆ ಕೊಲೆ ಪ್ರಕರಣ ದಾಖಲಾಗಿತ್ತು.
ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 7 ವರ್ಷ ಕಠಿಣ ಸಜೆ ಮತ್ತು 1 ಲಕ್ಷದ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.