ಬುದ್ಧಿಮಾತಿಗೆ ಕಚ್ಚಿ ಸಹೋದರನ ಕೊಲೆ: ನಾಯಿ-ಕುರಿಗಳ ಸಹಾಯದಿಂದ ಆರೋಪಿಯ ಬಂಧನ

ಬೆಳಗಾವಿ: ದುಡಿಯುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಪಾಪಿ ತಮ್ಮ ಸ್ವಂತ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಮೇ 8ರಂದು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬರೋಬ್ಬರಿ ಒಂದು ತಿಂಗಳ ಬಳಿಕ ಹಂತಕ ಬೇರೆ ಯಾರು ಅಲ್ಲ ಸಹೋದರ ಎನ್ನುವುದು ಗೊತ್ತಾಗೊದೆ. ಪಕ್ಕಾ ಪ್ಲ್ಯಾನ್ ಮಾಡಿಯೇ ಬಸವರಾಜ ಕಮತೆ, ಅಣ್ಣ ರಾಯಣ್ಣನನ್ನು ಕೊಲೆ ಮಾಡಿದ್ದು, ಕೊಲೆಯ ಸುಳಿವು ಸಿಗಬಾರದೆಂದು ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದ. ಕೊಲೆ ಮಾಡಿ ಏನು ಗೊತ್ತಿಲ್ಲದಂತಿದ್ದ. ಆದ್ರೆ, ಮೂಕ ಪ್ರಾಣಿ ಕೂರಿ ಹಾಗೂ ನಾಯಿಗಳು ಕೊಟ್ಟ ಸುಳಿವಿನಿಂದ ಯಮಕನಮರಡಿ ಪೊಲೀಸರು ಹಂತಕ ತಮ್ಮನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನಾಯಿ ಹಾಗೂ ಕುರಿಗಳು ಪೊಲೀಸ್ ನಾಯಿ ರೀತಿಯಲ್ಲೇ ಕೊಲೆಗಾರನ ಸುಳಿವು ನೀಡಿರುವುದು ಅಚ್ಚರಿ ಮೂಡಿಸಿದೆ.
30 ವರ್ಷದ ಯುವಕನ ಹೆಸರು ರಾಯಪ್ಪ ಕಮತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿ ಆಲೂರು ಗ್ರಾಮದವ ಈತ ಮನೆಗೆ ಹಿರಿಮಗ ಆಗಿದ್ದ. ಇನ್ನೂ ಈ ರಾಯಪ್ಪ ಮನೆ ಕೆಲಸ, ಕುರಿ ಕಾಯುವುದು ಸೇರಿ ಎಲ್ಲವನ್ನೂ ತಾನೇ ನಿರ್ವಹಿಸುತ್ತಿದ್ದ. ಇನ್ನಿಬ್ಬರು ಸಹೋದರರು ಮನಗೆ ಮಾರಿ ಊರಿಗೆ ಉಪಕಾರಿ ಎಂಬಂತಿದ್ದರು. ಕೆಲಸ ಮಾಡಿ, ಮನೆಗೆ ನೆರವಾಗಿ ಎಂದು ಇಬ್ಬರು ಸಹೋದರಿಗೆ ಆಗಾಗಾ ಬುದ್ಧಿ ಹೇಳುತ್ತಿದ್ದ. ಹೀಗೆ ಸಣ್ಣ ತಮ್ಮ ಬಸವರಾಜ್ ಗೆ ಬುದ್ದಿವಾದ ಹೇಳಿ ಮೇ.8ರಂದು ಎಂದಿನಂತೆ ತಮ್ಮ ಅರವತ್ತು ಕುರಿಗಳು ಹಾಗೂ ಸಾಕು ನಾಯಿಯನ್ನ ಕರೆದುಕೊಂಡು ಹೋಗಿದ್ದ. ತಮ್ಮದೇ ಜಮೀನಿನಲ್ಲಿ ಮೇಯಲು ಬಿಟ್ಟು ಮರದ ಕಳೆಗೆ ರಿಲ್ಸ್ ನೋಡುತ್ತಾ ಕುಳಿತಿದ್ದ. ಆಗಲೇ ಆಗುಂತಕನೊಬ್ಬ ಹಿಂದಿನಿಂದ ಬಂದು ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ರಾಯಪ್ಪ ಕೊಲೆಯಾದ ಬಳಿಕ ಸಂಜೆ ವೇಳೆ ಕುರಿಗಳು ಹಾಗೂ ನಾಯಿ ಮನೆಗೆ ವಾಪಾಸ್ ಆಗಿವೆ. ಆದ್ರೆ, ರಾಯಪ್ಪ ಮಾತ್ರ ಬಂದಿರಲಿಲ್ಲ. ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಾಯಪ್ಪ ಕಮತಿ ನಾಪತ್ತೆಯಾಗಿರೋ ಬಗ್ಗೆ ಯಮಕನರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಆರೋಪಿ ಹಿಡಿಯುವುದೇ ಕಷ್ಟವಾಗಿತ್ತು. ಕೊಲೆಯಾದ ಒಂದು ತಿಂಗಳ ಬಳಿಕ ಕುರಿ ಹಾಗೂ ನಾಯಿ ಕೊಟ್ಟ ಸುಳಿವಿನಿಂದ ಕಡೆಗೂ ಆರೋಪಿಯನ್ನ ಪೊಲೀಸರು ಬಂಧಿಸುವಯಲ್ಲಿ ಯಶಸ್ವಿಯಾಗಿದ್ದಾರೆ.
ನಾಯಿ, ಕುರಿಗಳಿಂದ ಕೊಲೆ ಸನ್ನಿವೇಷ ಮರುಸೃಷ್ಟಿ
ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದ ಹೊರ ವಲಯದಲ್ಲಿ ಶವವಾಗಿ ಪತ್ತೆಯಾದ ಕುರಿಗಾಯಿ ರಾಯಣ್ಣ ಕೊಲೆ ಪ್ರಕರಣ ದಾಖಲಿಸಕೊಂಡ ಯಮನಮರಡಿ ಪೊಲೀಸರು ಒಂದು ತಿಂಗಳಿಂದ ಸತತವಾಗಿ ಎಲ್ಲಾ ಆಯಾಮಗಳಿಂದ ತನಿಖೆ ಮಾಡಿದ್ದಾರೆ. ಆದ್ರೆ, ಯಾವುದೇ ಸುಳಿವು ಸಿಗಲ್ಲ. ಬಳಿಕ ಕೊಲೆ ಪ್ರಕರಣ ಸನ್ನಿವೇಶವನ್ನು ಮರುಸೃಷ್ಠಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಕೊಲೆಯಾದ ಸ್ಥಳದಲ್ಲಿಯೇ ಹೋಗಿ 60 ಕುರಿಗಳು ಹಾಗೂ ಒಂದು ಸಾಕು ನಾಯಿಯನ್ನ ಸ್ಥಳದಿಂದ ರಾಯಪ್ಪನ ಮನೆ ಕಡೆಗೆ ಬಿಡುತ್ತಾರೆ. ಮೂಕಪ್ರಾಣಿಗಳು 2ಕಿಮೀ ದೂರದಲ್ಲಿ ಇರೋ ಕಾಲುವೆವರೆಗೂ ಬಂದು ಅದರ ಮೇಲೆ ಹತ್ತಲು ಆಗದೇ ಅಲ್ಲೇ ನಿಂತು ಬಿಡುತ್ತವೆ. ಆಗ ರಾಯಪ್ಪನ ಸಹೋದರ ಬಸವರಾಜ್ ನಿಂದ ಕುರಿಗಳನ್ನ ಮೇಲೆ ಹತ್ತಿಸಲು ಹೇಳುತ್ತಾರೆ. ಕಾಲುವೆ ಮೇಲೆ ಆತ ಹತ್ತಿಸುತ್ತಿದ್ದಂತೆ ಸರಾಗವಾಗಿ ನಡೆದುಕೊಂಡು ಬಂದು ಕುರಿಗಳು ಹಾಗೂ ನಾಯಿ ಮನೆ ಸೇರಿಕೊಳ್ಳುತ್ತವೆ.
ಇದರಿಂದ ಪೊಲೀಸರಿಗೆ ಯಾರೋ ಪರಿಚಿತರೇ ಕುರಿಗಳಿಗೆ ಮನೆಯ ದಾರಿ ತೋರಿಸಿದ್ದಾರೆ ಎಂಬುದು ಅನುಮಾನ ಬಂದಿದೆ. ಘಟನೆ ನಡೆದ ದಿನ ಎರಡು ನಾಯಿಗಳಿದ್ರೂ ಬೊಗಳಿರುವುದಿಲ್ಲ ಜೊತೆಗೆ ಕುರಿಗಳನ್ನ ಕೂಡ ಮನೆಗೆ ಬಿಚ್ಚಿ ಕಳಿಸಿರುತ್ತಾರೆ ಅನ್ನೋದನ್ನ ಅಂದಾಜಿಸಿಯೇ ಈ ಮರುಸೃಷ್ಟಿ ಮಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗ ಮೃತನ ತಮ್ಮ ಬಸವರಾಜ್ ಕಮತಿಯ ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಪಾಪಿ ತಮ್ಮ ಒಪ್ಪಿಕೊಂಡಿದ್ದಾನೆ.
ಅಣ್ಣನ ಹತ್ಯೆ, ತಪ್ಪೊಪ್ಪಿಕೊಂಡ ತಮ್ಮ
ಕುವೈತ್ ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕೆಲ ತಿಂಗಳ ಹಿಂದಷ್ಟೇ ಊರಿಗೆ ವಾಪಾಸ್ ಆಗಿ ಉಂಡಾಡಿ ಗುಂಡನಂತೆ ಓಡಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಅಣ್ಣ ದುಡಿಮೆ ಮಾಡಲು ನಿತ್ಯವೂ ತಮ್ಮನೆ ಬುದ್ದಿವಾದ ಹೇಳಿದ್ದ. ಇದರಿಂದ ಆಕ್ರೋಶಗೊಂಡ ತಮ್ಮ ಅಣ್ಣನ ಕಥೆ ಮುಗಿಸಲು ಪಕ್ಕಾ ಪ್ಲ್ಯಾನ್ ಮಾಡಿದ್ದ. ಅದರಂತೆ ಮೊಬೈಲ್ ನ ಮನೆಯಲ್ಲಿ ಬಿಟ್ಟು ತಾನೊಬ್ಬನೆ ಅಣ್ಣನಿದ್ದ ಕಡೆಗೆ ಹೋಗಿ ಕಾರದ ಪುಡಿ ಎರಚಿ ಕೊಲೆ ಮಾಡಿ ಅಲ್ಲಿದ್ದ ಕುರಿಗಳನ್ನ ಯಾರೋ ಕದಿಯಬಾರದು ಎಂದು ಬಿಚ್ಚಿ ಕಾಲುವೆ ಹತ್ತಿಸಿ ಮನೆಗೆ ಕಳುಹಿಸಿದ್ದ. ಬಳಿಕ ಏನು ಗೊತ್ತಿಲ್ಲದಂತೆ ತಾನೂ ಕೂಡ ಮನೆ ಸೇರಿಕೊಂಡಿರುವುದಾಗಿ ಹೇಳಿದ್ದಾನೆ. ಇದೀಗ ಪಾಪಿ ತಮ್ಮ ಆರೋಪಿ ಬಸವರಾಜ್ ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಪೊಲೀಸರು ಕಳುಹಿಸಿದ್ದಾರೆ.
ಅದೇನೆ ಹೇಳಿ ತಾನು ಕಷ್ಟ ಪಟ್ಟು ದುಡಿದು ತಮ್ಮನಿಗೆ ಓದಿಸಿ ಒಳ್ಳೆ ಸ್ಥಾನಕ್ಕೆ ಬರಲಿ ಎಂದು ಅಂದುಕೊಂಡು ಆತನನ್ನ ದೂರದ ದೇಶ ಕುವೈತ್ ಗೂ ಕಳುಹಿಸಿದ್ದ. ಆದ್ರೆ ಅಲ್ಲಿ ಬಸವರಾಜ್ ಪೆಟ್ರೊಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ದು ಆಗಲ್ಲ ಎಂದು ಓಡಿ ಬಂದು ಇಲ್ಲಿ ಅಣ್ಣನನ್ನೇ ಬಲಿ ಪಡೆದುಕೊಂಡಿದ್ದಾನೆ. ಸಂಪಾಸಿದ ಹಣ ಮನೆಗೆ ಕೊಡದೇ, ಮನೆಯಲ್ಲಿ ಕೆಲಸ ಮಾಡದೇ ಮಜಾ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಹತ್ಯೆ ಮಾಡಿದ ತಮ್ಮನ ಕೊಲೆ ರಹಸ್ಯವನ್ನ ಮೂಕ ಪ್ರಾಣಿಗಳು ಬಿಚ್ಚಿಟ್ಟಿವೆ.