ಹನಿಮೂನ್ನಲ್ಲಿ ಕೊಲೆ –ಕೊಲೆ ಮಾಡಿ ಅಂತ್ಯಕ್ರಿಯೆಗೂ ಹೋಗಿದ್ದ ಸೋನಮ್ ಪ್ರಿಯಕರ

ಇಂದೋರ್: ಮೇಘಾಲಯಕ್ಕೆ ಹನಿಮೂನ್(Honeymoon)ಗೆಂದು ಹೋಗಿದ್ದ ರಾಜಾ ರಘುವಂಶಿ ಹೆಂಡತಿಯ ಪ್ರಿಯಕರನಿಂದ ಕೊಲೆಯಾಗಿದ್ದರು. ಸೋನಮ್ ಪ್ರಿಯಕರ ರಾಜಾ ಕುಶ್ವಾಹ ರಾಜಾನನ್ನು ಕೊಲೆ ಮಾಡಿ, ಅವರ ಅಂತ್ಯಕ್ರಿಯೆಗೂ ಹೋಗಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ರಾಜ್ ಕುಶ್ವಾಹ ಡ್ರೈವರ್ ಆಗಿ ಬಂದು ರಾಜಾ ಅಂತ್ಯಕ್ರಿಯೆಗೆ ಬರುವ ಜನರನ್ನು ಸ್ಥಳಕ್ಕೆ ಕರೆದೊಯ್ಯುವ ಕೆಲಸ ಮಾಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೋಮವಾರ ಸೋನಂ ಅವರನ್ನು ಮೇಘಾಲಯ ಪೊಲೀಸರು ಬಂಧಿಸಿದ್ದರು. ಆಕೆಯ ಮೂವರು ಸಹಾಯಕರಾದ ಆಕಾಶ್ ರಜಪೂತ್ (19), ವಿಶಾಲ್ ಸಿಂಗ್ ಚೌಹಾಣ್ (22) ಮತ್ತು ರಾಜ್ ಸಿಂಗ್ ಕುಶ್ವಾಹ (21)ನನ್ನು ಬಂಧಿಸಲಾಯಿತು.
ರಾಜಾ ಮೃತದೇಹ ಇಲ್ಲಿಗೆ ಬಂದಾಗ, ಗೋವಿಂದ ನಗರ ಖಾರ್ಚಾ ಪ್ರದೇಶದಲ್ಲಿ ಮನೆ ಹೊಂದಿರುವ ಸೋನಂ ಅವರ ಕುಟುಂಬವು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ನಾಲ್ಕು-ಐದು ವಾಹನಗಳನ್ನು ವ್ಯವಸ್ಥೆ ಮಾಡಿತ್ತು. ಅದರಲ್ಲಿನ ಒಂದು ವಾಹನದ ಡ್ರೈವರ್ ಆಗಿ ರಾಜ್ ಕುಶ್ವಾಹ ಬಂದಿದ್ದ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.ನಾವು ಮಾತನಾಡಿರಲಿಲ್ಲ, ಆತನ ಪರಿಚಯವೂ ಇರಲಿಲ್ಲ. ಬಳಿಕ ಮಾಧ್ಯಮದಲ್ಲಿ ಫೋಟೊ ನೋಡಿದ ಮೇಲೆ ಈ ಘಟನೆ ನೆನಪಾಯಿತು ಎಂದು ಪ್ರತ್ಯಕ್ಷದರ್ಶಿ ಲಕ್ಷ್ಮಣ್ ಸಿಂಗ್ ರಾಥೋಡ್ ತಿಳಿಸಿದ್ದಾರೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಮೇ11 ರಂದು ರಾಜಾ ರಘುವಂಶಿ ಹಾಗೂ ಸೋನಮ್ ವಿವಾಹವಾಗಿದ್ದರು, ಇಬ್ಬರೂ ಹನಿಮೂನ್ಗೆಂದು ಬಂದಿದ್ದರು. ಜೂನ್ 2ರಂದು ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿರುವ ವೈಸಾವ್ಡಾಂಗ್ ಜಲಪಾತದ ಬಳಿ ರಾಜಾ ಶವ ಪತ್ತೆಯಾಗಿತ್ತು.ದೇಹವು ಕೊಳೆತ ಸ್ಥಿತಿಯಲ್ಲಿತ್ತು. ಮೇ 23 ರಂದು ದಂಪತಿ ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಹತ್ಯೆಗೆ ಸಂಬಂಧಿಸಿದಂತೆ ಸೋನಮ್ ಹಾಗೂ ಇತರೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗಂಡನನ್ನು ಕೊಲೆ ಮಾಡಲು ಸೋನಂ ಜನರನ್ನು ನೇಮಿಸಿಕೊಂಡಿದ್ದಳು, ಆರೋಪಿಗಳಲ್ಲಿ ಒಬ್ಬನಾದ ರಾಜ್ ಕುಶ್ವಾಹ ಜತೆ ಆಕೆಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ. ಸೋನಮ್ ತಂದೆ ಅವರ ಭಾಗಿಯಾಗುವಿಕೆಯನ್ನು ನಿರಾಕರಿಸಿದ್ದಾರೆ ಮತ್ತು ಕುಶ್ವಾಹ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ, ಮೇಘಾಲಯ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಇಂದೋರ್ನಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಸ್ಥಳೀಯರು ರಾಜಾ ಅವರ ಮನೆಯ ಹೊರಗೆ ಜಮಾಯಿಸಿ, ಸೋನಮ್ ಅವರ ಫೋಟೋವನ್ನು ಸುಟ್ಟುಹಾಕಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಸೋನಮ್ ಅವರ ತಾಯಿಯ ಮನೆಯ ಹೊರಗೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ರಾಜಾ ರಘುವಂಶಿಯವರ ಮೃತದೇಹ ಪತ್ತೆಯಾದ ಸುಮಾರು ಒಂದು ವಾರದ ನಂತರ, ಅವರ ಪತ್ನಿ ಸೋನಮ್ ಉತ್ತರ ಪ್ರದೇಶದ ಗಾಜಿಪುರದ ಡಾಬಾವೊಂದರಲ್ಲಿ ಅನಿರೀಕ್ಷಿತವಾಗಿ ಮತ್ತೆ ಕಾಣಿಸಿಕೊಂಡರು. ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.