ದರ್ಶನ್, ಪವಿತ್ರಾ ಗೌಡ ಜಾಮೀನು ಪ್ರಶ್ನೆ: ಆರೋಪಿಗಳ ವರ್ತನೆ ನೋಡಿ ನ್ಯಾಯಮೂರ್ತಿಗೆ ಅಚ್ಚರಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನು ವಿಚಾರಣೆಗೆ ಸುಪ್ರೀಂ ಕೋರ್ಟ್ನಲ್ಲಿ ಮುಕ್ತಾಯ ಆಗಿದೆ. ದರ್ಶನ್ ಪವಿತ್ರ ಗೌಡ ಮುಂತಾದವರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಮಹದೇವನ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದೆ. ಪ್ರಾಸಿಕ್ಯೂಷನ್ ಪರ ಸಿದ್ದಾರ್ಥ ಲೂಥ್ರಾ ವಾದ ಮಂಡನೆ ಮಾಡಿದರು. ದರ್ಶನ್ ಪರ ಸಿದ್ದಾರ್ಥ ದವೆ ವಾದ ಮಾಡಿದರು.

‘ಪ್ರಕರಣದ ವೇಳೆ ವಾಹನದಲ್ಲಿದ್ದ ಆರೋಪಿಗಳನ್ನು ಗುರುತಿಸಲಾಗಿದೆ. ಅವರಿಗೂ ಈಗ ಜಾಮೀನು ಸಿಕ್ಕಿದೆ. ಜೀಪ್ ರಾಂಗ್ಲರ್ ವಿನಯ್ ಎಂಬಾತನಿಗೆ ಸೇರಿದ್ದು. ಆತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನ ಮಾಲೀಕ ಹಾಗೂ ಆರೋಪಿ. 3 ಜನ ತಾವೇ ಕೊಲೆ ಮಾಡಿದ್ದೇವೆಂದು ಸರೆಂಡರ್ ಆಗಿದ್ದರು. ಎ4 ರಾಘವೇಂದ್ರ ಸಿಡಿಆರ್ ಪರಿಶೀಲಿಸಿದಾಗ 45 ಕಾಲ್ ಮಾಡಿದ್ದಾನೆ. ಘಟನೆ ವೇಳೆ ನಾಗರಾಜ್ಗೂ ಈತ ಮೆಸೇಜ್ ಮಾಡಿದ್ದಾನೆ’ ಎಂದು ಸಿದ್ದಾರ್ಥ ಲೂತ್ರಾ ವಾದ ಮಂಡಿಸಿದರು.
ಪವನ್ ಸೂಚನೆ ಮೇರೆಗೆ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಯಿತು. ದರ್ಶನ್, ಪವಿತ್ರಾಗೌಡ ಮತ್ತಿತರರು ಶೆಡ್ಗೆ ಬಂದು ಹಲ್ಲೆ ಮಾಡಿದರು. ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂದು ಜಡ್ಜ್ ಎದುರು ಸಿದ್ದಾರ್ಥ ಲೂತ್ರಾ ಮಾಹಿತಿ ನೀಡಿದರು.
ಹಲ್ಲೆಯ ಪ್ರತ್ಯಕ್ಷದರ್ಶಿ ಯಾರಾದರೂ ಇದ್ದಾರಾ ಎಂದು ಜಡ್ಜ್ ಹೇಳಿದರು. ‘ಪುನೀತ್ ಹಾಗೂ ಕಿರಣ್ ಈ ಘಟನೆಯ ಪ್ರತ್ಯಕ್ಷದರ್ಶಿಗಳು. ಇವರು ಶೆಡ್ನಲ್ಲಿ ಕೆಲಸಗಾರರಾಗಿದ್ದರು. ಒಬ್ಬನ ಹೇಳಿಕೆಯನ್ನು 7 ದಿನಗಳಲ್ಲಿ ದಾಖಲಿಸಲಾಗಿದೆ. ಮತ್ತೊಬ್ಬನ ಹೇಳಿಕೆಯನ್ನು 20 ದಿನಗಳಲ್ಲಿ ದಾಖಲಿಸಲಾಗಿದೆ. ಆತ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುತ್ತಿದ್ದ ಹೀಗಾಗಿ ವಿಳಂಬವಾಗಿದೆ. 7 ದಿನಗಳಲ್ಲಿ ಕಿರಣ್, 12 ದಿನಗಳಲ್ಲಿ ಪುನೀತ್ ಹೇಳಿಕೆ ದಾಖಲಾಗಿದೆ’ ಎಂದು ಸಿದ್ದಾರ್ಥ್ ಲೂತ್ರ ತಿಳಿಸಿದರು.
ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಗಳು ದರ್ಶನ್ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಆ ವಿಷಯ ತಿಳಿದು ಜಡ್ಜ್ಗೆ ಅಚ್ಚರಿ ಆಯಿತು. ‘ನಂಬಲಸಾಧ್ಯ! ಘಟನೆ ನಂತರ ಫೋಟೋ ತೆಗೆಸಿಕೊಂಡರೇ? ಕೊಲೆ ಮಾಡಿ ಇಂತಹ ಫೋಟೋ ತೆಗೆದುಕೊಳ್ಳಲು ಸಾಧ್ಯವೇ? ಇವರೆಂತಹ ವ್ಯಕ್ತಿಗಳು? ನಾನು ಆಕಸ್ಮಿಕ ಫೋಟೋ ಎಂದುಕೊಂಡಿದ್ದೆ’ ಎಂದು ಜಡ್ಜ್ ಜೆ.ಬಿ. ಪರ್ದಿವಾಲಾ ಅಚ್ಚರಿ ವ್ಯಕ್ತಪಡಿಸಿದರು.