ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮಾನಸಿಕ ಅಸ್ವಸ್ಥ ಆರೋಪಿ ಪೊಲೀಸರ ಗುಂಡಿಗೆ ಬಲಿ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಪೊವೈ ಪ್ರದೇಶದಲ್ಲಿರುವ (Powai Area) ಆರ್ಎ ಸ್ಟುಡಿಯೋನಲ್ಲಿ 17 ಮಕ್ಕಳನ್ನ ಒತ್ತೆಯಾಳಾಗಿ (Mumbai Hostage) ಇರಿಸಿಕೊಂಡಿದ್ದ ಆರೋಪಿ ರೋಹಿತ್ ಆರ್ಯ ಪೊಲೀಸರ ಗುಂಡಿಗೆ (Police Fire) ಬಲಿಯಾಗಿದ್ದಾನೆ. ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ.

ಕಾರ್ಯಾಚರಣೆ ಸಮಯದಲ್ಲಿ ಪೊಲೀಸರು ಆರ್ಯ (Rohit Arya) ಮೇಲೆ ಗುಂಡು ಹಾರಿಸಿದ್ದರು, ಗಂಭೀರ ಸ್ಥಿತಿಯಲ್ಲಿದ್ದ ಆರೋಪಿಯನ್ನ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆರ್ಯ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಘಟನೆ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.
17 ಮಕ್ಕಳ ಅಪಹರಣ ಒಂದು ಸಿನಿಮೀಯ ಕಥೆ
ಗುರುವಾರ ಮುಂಬೈನ ಪೊವೈನಲ್ಲಿರುವ ಆರ್ಎ ಸ್ಟುಡಿಯೋಗೆ (RA Studios) ಆಡಿಷನ್ಗಾಗಿ ಮಕ್ಕಳನ್ನ ಕರೆಯಲಾಗಿತ್ತು. ಅಲ್ಲಿಂದಲೇ ಮಕ್ಕಳನ್ನ ಅಪಹರಿಸಲಾಗಿತ್ತು. ತಾನು 17 ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಬಗ್ಗೆ ರೋಹಿತ್ ಆರ್ಯ ವಿಡಿಯೋ ಸಂದೇಶವೊಂದನ್ನ ಹರಿಬಿಟ್ಟಿದ್ದ. ಪೊವೈ ಪ್ರಾಂತ್ಯದ ಮಗ್ಗುಲಲ್ಲಿರುವ ಕಟ್ಟಡವೊಂದರಲ್ಲಿ ತನ್ನದೊಂದು ಸ್ವಂತ ಸ್ಟುಡಿಯೋ ಇದ್ದು ಅದರಲ್ಲಿ ಮಕ್ಕಳನ್ನ ಹಿಡಿದಿಟ್ಟುಕೊಂಡಿರುವುದಾಗಿ ಆತ ವಿಡಿಯೋ ಸಂದೇಶದಲ್ಲಿ ಹೇಳಿದ್ದ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಆತನಿರುವ ಕಟ್ಟಡ ಪತ್ತೆ ಹಚ್ಚಿ, ಮಕ್ಕಳನ್ನು ರಕ್ಷಿಸಿದ್ರು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು ಆರ್ಯನಿಗೆ ತಾಗಿದೆ.
ಹಣ ಬೇಕಿಲ್ಲ, ಉಗ್ರವಾದಿಯೂ ಅಲ್ಲ
ವಿಡಿಯೋ ಸಂದೇಶದಲ್ಲಿ ಆತ ಮಕ್ಕಳನ್ನು ಹಿಡಿದಿಟ್ಟುಕೊಂಡಿದ್ದಕ್ಕೆ ಪ್ರತಿಯಾಗಿ ಹಣಕ್ಕಾಗಿ ಆಗ್ರಹ ಮಾಡಿರಲಿಲ್ಲ. ಅಲ್ಲದೆ, ತಾನು ಉಗ್ರವಾದಿಯೂ ಅಲ್ಲ ಎಂಬುದು ವಿಡಿಯೋದ ಆರಂಭದಲ್ಲೇ ಹೇಳಿದ್ದ. ನನ್ನ ಹೆಸರು ರೋಹಿತ್ ಆರ್ಯ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಗಿದೆ. ಆದರೆ, ಸಾಯಲು ಇಷ್ಟವಿಲ್ಲ. ಅದರ ಬದಲಿಗೆ, ನಾನು ಸುಮಾರು 17 ಮಕ್ಕಳನ್ನು ಅಪಹರಿಸಿ ತಂದು ಹಿಡಿದಿಟ್ಟುಕೊಂಡಿದ್ದೇನೆ ಎಂದು ವಿಡಿಯೋನಲ್ಲಿ ಹೇಳಿದ್ದ. ನನ್ನದು ತುಂಬಾ ಸರಳ ಬೇಡಿಕೆಗಳಿವೆ. ಅವುಗಳನ್ನು ಈಡೇರಿಸಿದ್ರೆ ಸಾಕು. ಈ ಸಮಾಜದ ಕೆಲವರ ಬಳಿ ಮಾತನಾಡಬೇಕಿದೆ. ಕೆಲವು ನೈತಿಕ ಪ್ರಶ್ನೆಗಳನ್ನು ನಾನು ಕೆಲವರಲ್ಲಿ ಕೇಳಬೇಕಿದೆ. ಯಾರ ಬಳಿ ಕೇಳಬೇಕು ಎಂಬುದನ್ನು ನಾನು ಹೇಳುತ್ತೇನೆ. ಅಲ್ಲಿಯವರೆಗೆ ಪೊಲೀಸರಾಗಲೀ ಅಥವಾ ಯಾರೇ ಆಗಲಿ ಸಾವಧಾನದಿಂದ ಇರಬೇಕು. ಇಲ್ಲವಾದ್ರೆ, ನಾನು ನನ್ನೊಂದಿಗೆ ಈ ಮಕ್ಕಳಿರುವ ಸ್ಟುಡಿಯೋಕ್ಕೆ ಬೆಂಕಿ ಹಾಕುತ್ತೇನೆ. ಅಕಸ್ಮಾತ್ ನಾನು ಸತ್ತರೆ, ಈ ಮಕ್ಕಳಿರುವ ಸ್ಟುಡಿಯೋಕ್ಕೆ ಬೇರೆ ಯಾರಾದರೂ ಬೆಂಕಿ ಹಾಕುತ್ತಾರೆ. ಹಾಗಾಗಿ, ಪೊಲೀಸರು ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಏನಾದರೂ ನನಗೆ ತೊಂದರೆ ನೀಡಲು ಯತ್ನಿಸಿದರೆ, ನನಗೆ ತಲೆ ಕೆಡುತ್ತದೆ ಎಂದು ಹೇಳಿದ್ದ.
ಆತನೊಬ್ಬ ಮಾನಸಿಕ ಅಸ್ವಸ್ಥ
ಬಂಧಿತ ಆರ್ಯನಿಂದ ನಕಲಿ ಗನ್ ವಶಕ್ಕೆ ಪಡೆಯಲಾಗಿದೆ. ಗನ್ ಮಾದರಿಯದ್ದಾಗಿತ್ತಷ್ಟೇ ನಿಜವಾದ ಗನ್ ಆಗಿರಲಿಲ್ಲ. ಆದರೂ ಅದನ್ನು ತೋರಿಸಿ ಆತ ಮಕ್ಕಳನ್ನು ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಮಂಡಿಸಿರುವ ಡಿಮ್ಯಾಂಡ್ ಗಳನ್ನು ನೋಡಿದ್ರೆ ಆತ ಮಾನಸಿಕವಾಗಿ ಅಸ್ವಸ್ಥ ಎಂದೆನಿಸುತ್ತಿದೆ. ತನಿಖೆ ನಡೆಸಲಾಗುತ್ತಿದ್ದು, ತನಿಖೆ ಮುಗಿದ ಮೇಲಷ್ಟೇ ಗೊತ್ತಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಅದೇ ಸ್ಥಳದಲ್ಲಿ ಅನುಮಾನಾಸ್ಪದ ರಾಸಾಯನಿಕ ವಸ್ತುಗಳೂ ಕೂಡ ಪತ್ತೆಯಾಗಿದೆ. ಸದ್ಯ ಮಕ್ಕಳೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.