ಅಸ್ಸಾಂನಲ್ಲಿ ತಾಯಿಯ ಕ್ರೌರ್ಯ: ಪ್ರೇಮಕ್ಕಾಗಿ 10 ವರ್ಷದ ಮಗುವನ್ನು ಕೊಲೆ ಮಾಡಿ ಸೂಟ್ಕೇಸ್ನಲ್ಲಿ ಹಾಕಿದ ಘಟನೆ

ಅಸ್ಸಾಂ: ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ ತಾಯಿಯ ತ್ಯಾಗ ಇದಕ್ಕೆ ಕಾರಣ. ಆದರೆ ಕಾಲದ ಮಹಿಮೆಯೂ ಏನೋ ತಾಯಿಯರ ಗುಣ ಬದಲಾಗುತ್ತಿದೆ. ಸಹನೆ ತ್ಯಾಗವಿರಬೇಕಾದ ಜಾಗದಲ್ಲಿ ಕ್ರೌರ್ಯ ದುರಾಸೆ ತುಂಬುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಅಲ್ಲಲ್ಲಿ ತಾಯಿಯೇ ಪುಟ್ಟ ಕಂದಮ್ಮಗಳನ್ನು ಕೊಂದ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳಿಗೆ ಈಗ ಮತ್ತೊಂದು ಉದಾಹರಣೆ ಅಸ್ಸಾಂನಲ್ಲಿ ನಡೆದ ಈ ಘಟನೆ.
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಕಂದನನ್ನು ತಾಯಿಯೊಬ್ಬಳು ತನ್ನ ಲವರ್ ಸಹಾಯದಿಂದ ಕೊಲೆ ಮಾಡಿ ಬಳಿಕ ಮಗುವಿನ ದೇಹವನ್ನು ಸೂಟ್ಕೇಸ್ಗೆ ತುಂಬಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಇದು ಬೆಂಗಳೂರಿನ ಸ್ಟಾರ್ಟ್ಅಪ್ ಸಿಇಒ ಸೂಚನಾ ಸೇಠ್ ಪ್ರಕರಣವನ್ನೇ ಹೋಲುತ್ತಿದೆ. ಸೂಚನಾ ಸೇಠ್ ಕೂಡ ವಿಚ್ಛೇದಿತ ಪತಿಯ ಮೇಲಿನ ಸಿಟ್ಟಿಗೆ ಹೆತ್ತ ನೋವನ್ನೂ ಮರೆತು ಪುಟ್ಟ ಕಂದನನ್ನೇ ಹತ್ಯೆ ಮಾಡಿದ್ದಳು.
ಆದರೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪ್ರಕರಣದಲ್ಲಿ ಮಹಿಳೆಯೊಬ್ಬಳು ತನ್ನ ಪ್ರೇಮಿಗಾಗಿ 10 ವರ್ಷದ ಕಂದನನ್ನೇ ಕೊಂದು ಬಳಿಕ ಸೂಟ್ಕೇಸ್ನಲ್ಲಿ ತುಂಬಿದ್ದಾಳೆ. ಈ ಮಹಿಳೆ ಎರಡು ತಿಂಗಳ ಹಿಂದಷ್ಟೇ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಳು.
ಕೊಲೆಯಾದ ಮಗುವನ್ನು 5ನೇ ಕ್ಲಾಸ್ನಲ್ಲಿ ಓದುತ್ತಿರುವ ಮೃನ್ಮಯ್ ಬರ್ಮನ್ ಎಂದು ಗುರುತಿಸಲಾಗಿದೆ. ಈತ ನವೋದಯಾ ಜಾಟಿಯಾ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿದ್ದ. ಈತನ ಮೃತದೇಹ ಅರಣ್ಯ ಇಲಾಖೆ ಕಚೇರಿಯ ಬಳಿಯ ನಿರ್ಜನ ರಸ್ತೆಯ ಬಳಿ ಪತ್ತೆಯಾಗಿದ್ದು, ಸ್ಥಳೀಯ ಸ್ಕ್ರ್ಯಾಪ್ ಸಂಗ್ರಾಹಕರೊಬ್ಬರು ಅವರ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ಅಸ್ಸಾಂ ಪೊಲೀಸರು ಮಗುವಿನ ತಾಯಿ ಹಾಗೂ ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ. ಮಗುವಿನ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಸೂಟ್ಕೇಸ್ನಲ್ಲಿ ತುಂಬಲಾಗಿತ್ತು.
ಹೀಗೆ ಮಗುವನ್ನು ಕೊಂದ ಪಾಪಿ ತಾಯಿಯನ್ನು ದೀಪಾಲಿ ರಾಜ್ಬೊಂಗ್ಶಿ ಹಾಗೂ ಆಕೆಯ ಪ್ರೇಮಿಯನ್ನು ಜ್ಯೋತಿಮಯ್ ಹಲೋಯಿ ಎಂದು ಗುರುತಿಸಲಾಗಿದೆ. ಸಂಶಯದ ಮೇಲೆ ಪೊಲೀಸರು ದೀಪಾಲಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕ್ಲಿನಿಕ್ನಲ್ಲಿ ಕೆಲಸ ಮಾಡುವ ದೀಪಾಲಿ, ಆರಂಭದಲ್ಲಿ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದಳು ಮತ್ತು ಪೊಲೀಸರಿಗೆ ದೂರು ಕೂಡ ನೀಡಿದ್ದಳು. ಆದರೆ ಅವರ ಹೇಳಿಕೆಗಳಲ್ಲಿನ ವ್ಯತ್ಯಾಸಗಳಿಂದ ಅನುಮಾನಗೊಂಡ ಪೊಲೀಸರು ಸರಿಯಾಗಿ ವಿಚಾರಿಸಿದಾಗ ತಾವೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಅನುಮಾನದ ಮೇಲೆ ನಾವು ತನಿಖೆ ಮಾಡಿದಾಗ ಮಗುವಿನ ತಾಯಿ ದೀಪಾಲಿ ಎರಡು ತಿಂಗಳ ಹಿಂದೆ ತಮ್ಮ ಪತಿ ಬಿಕಾಶ್ ಬರ್ಮನ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ತಾತ್ಕಾಲಿಕ ಪಿಯೋನ್ ಆಗಿದ್ದ ಜ್ಯೋತಿಮೊಯ್ ಹಲೋಯ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಗಳಿಬ್ಬರೂ ಮಗುವನ್ನು ಕೊಲ್ಲಲು ಸಂಚು ರೂಪಿಸಿ ಭಯಾನಕ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿ ಹೇಳಿದರು. ತಾಯಿ ದೀಪಾಲಿ ಪ್ರಸ್ತುತ ನಮ್ಮ ವಶದಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಪರಾಧ ಸ್ಥಳದಿಂದ ಮಗುವಿನ ಶಾಲಾ ಚೀಲವನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಮರುಸೃಷ್ಟಿಗಾಗಿಇಬ್ಬರೂ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು. ಬಳಿಕ ಮ್ಯಾಜಿಸ್ಟ್ರೇಟ್ ಸ್ಥಳಕ್ಕೆ ಭೇಟಿ ನೀಡಿ ವಶಪಡಿಸಿಕೊಂಡ ಮಗುವಿನ ದೇಹದ ಭಾಗಗಳನ್ನು ಪರಿಶೀಲಿಸಿದರು.