ಮದ್ಯದ ಹಣಕ್ಕೆ ತಾಯಿಯ ಬಲಿ – ದಾವಣಗೆರೆಯಲ್ಲಿ ಹೃದಯವಿದ್ರಾವಕ ಘಟನೆ

ದಾವಣಗೆರೆ: ಮದ್ಯ ಸೇವನೆಗೆ ಹಣ ನೀಡದ ತಾಯಿಯನ್ನು ಪುತ್ರನೊಬ್ಬ ಕೋಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಐಗೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ರತ್ನಬಾಯಿ (62) ಕೊಲೆಯಾದ ಮಹಿಳೆ. ರಾಘವೇಂದ್ರ ನಾಯ್ಕ (41) ತಾಯಿಯನ್ನು ಕೊಲೆ ಮಾಡಿದ ಪುತ್ರ.
‘ರಾಘವೇಂದ್ರ ನಾಯ್ಕನ ಪತ್ನಿಯು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು.
ಮನೆಯಲ್ಲಿ ರತ್ನಬಾಯಿ ಹಾಗೂ ಆರೋಪಿ ಮಾತ್ರ ಇದ್ದರು. ಕುಡಿಯಲು ಹಣ ನೀಡುವಂತೆ ಬುಧವಾರ ರಾತ್ರಿ ತಾಯಿಯನ್ನು ಪೀಡಿಸಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ರತ್ನಬಾಯಿ ಇದಕ್ಕೆ ಸ್ಪಂದಿಸಿಲ್ಲ. ಕುಪಿತಗೊಂಡ ಪುತ್ರ ಕೋಲಿನಿಂದ ಹೊಡೆದು ಸಾಯಿಸಿದ್ದಾನೆ’ ಎಂದು ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.