ನಾಯಿ ಕಚ್ಚಿದ ವಿಚಾರಕ್ಕೆ ತಾಯಿ-ಮಗನ ಮೇಲೆ ಹಲ್ಲೆ

ಮಡಂತ್ಯಾರು: ಬೆಳಾಲು ಗ್ರಾಮದ ಶ್ರೀನಿಲಯ ನಿವಾಸಿ ಬೆಳಾಲು ಗ್ರಾಮ ಪಂಚಾಯತ್ ನೀರು ನಿರ್ವಾಹಕ ಶಶಿಧರ ಮತ್ತು ಅವರ ತಾಯಿಗೆ ಅಣ್ಣಿ ಗೌಡ ಮತ್ತು ಮನೆಯವರು ಹಲ್ಲೆ ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಶಿಧರ ಅವರ ಮನೆಯ ನಾಯಿ ಪಕ್ಕದ ಮನೆಯ ಸುಮಿತ್ರಾ ಅಣ್ಣಿ ಗೌಡ ಅವರ ಮನೆಯ ನಾಯಿಯನ್ನು ಕಚ್ಚಿ ಕೊಂದು ಹಾಕಿದೆ ಎಂದು ಅಣ್ಣಿ ಗೌಡ ಹಾಗೂ ಅವರ ಹೆಂಡತಿ ಮತ್ತು ಮಕ್ಕಳು ಶಶಿಧರ್ ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ಮಾಡಿರುತ್ತಾರೆ.
ಇದೇ ವೇಳೆ ಅಣ್ಣಿ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯ ರವಿಕೆಯನ್ನು ಹರಿದು ಮಾನಕ್ಕೆ ಕುಂದುಂಟು ಮಾಡುವ ರೀತಿಯಲ್ಲಿ ವರ್ತಿಸಿ, ನಿಮ್ಮ ಮಗ ಶಶಿಧರನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎನ್ನಲಾಗಿದೆ.
ಗಾಯಗೊಂಡಿರುವ ಶಶಿಧರ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಶಶಿಧರ ಅವರ ತಾಯಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.