ಮೋಹನ್ಲಾಲ್ ಅಭಿನಯದ ‘ತುಡರುಂ’ ಚಿತ್ರಕ್ಕೆ ಕೃತಿಚೌರ್ಯದ ಆರೋಪ: ನಿರ್ದೇಶಕನ ಫೇಸ್ಬುಕ್ ಪೋಸ್ಟ್ನಿಂದ ವಿವಾದ

ಈ ವರ್ಷದ ಬಿಗ್ ಹಿಟ್ ಸಿನಿಮಾ ಮತ್ತು ಅತಿಹೆಚ್ಚು ಕಲೆಕ್ಷನ್ ಮಾಡಿರುವ ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ (Mohan Lal) ಅಭಿನಯದ ‘ತುಡರುಂʼ (Thudarum) ಚಿತ್ರ ಬಿಡುಗಡೆಯಾಗಿ, ಓಟಿಟಿಗೆ ಬಂದಮೇಲೆ ಹೊಸ ಸಂಕಷ್ಟಕ್ಕೆ ಗುರಿಯಾಗಿದೆ. ತರುಣ್ ಮೂರ್ತಿ ನಿರ್ದೇಶನದ ಸಿನಿಮಾ ಬಿಡುಗಡೆಯಾಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು, ನಂತರ ಓಟಿಟಿಯಲ್ಲೂ (OTT) ಹಿಟ್ ಆಗಿತ್ತು. ಆದರೆ ಈಗ ಬ್ಲಾಕ್ ಬಸ್ಟರ್ ಸಿನಿಮಾವನ್ನು ಕದ್ದ ಚಿತ್ರ ಎಂದು ಆರೋಪಿಸಲಾಗಿದೆ. ಮಲಯಾಳಂನ ಸಿನಿಮಾ ನಿರ್ದೇಶಕನೊಬ್ಬ ಕೃತಿಚೌರ್ಯದ (Copy) ಆರೋಪ ಮಾಡಿದ್ದಾರೆ. ‘ತುಡರುಂ’ ಸಿನಿಮಾ ಅನ್ನು ತನ್ನ ಚಿತ್ರಕತೆ ಕದ್ದು ನಿರ್ಮಿಸಲಾಗಿದೆ ಎಂದಿದ್ದಾರೆ.
‘ಥುಡರುಂ’ ಸಿನಿಮಾ ಮೇಲೆ ಚಿತ್ರಕತೆ ಕದ್ದ ಆರೋಪ
ಮಲಯಾಳಂ ಚಲನಚಿತ್ರ ನಿರ್ಮಾಪಕ ಸನಲ್ ಕುಮಾರ್ ಸಸಿಧರನ್, ‘ತುಡರುಂʼ ಸಿನಿಮಾ ತಯಾರಕರ ಮೇಲೆ ಕೃತಿಚೌರ್ಯದ ಆರೋಪ ಮಾಡಿದ್ದಾರೆ.
ಮೋಹನ್ ಲಾಲ್ ಅಭಿನಯದ ಈ ಚಿತ್ರವು 2020ರಲ್ಲಿ ನಾನು ಬರೆದ ‘ಥೀಯಟ್ಟಂ’ ಚಿತ್ರದ ಕಥೆಯನ್ನು ಆಧರಿಸಿದೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.ಸಿನಿಮಾ ನಿರ್ದೇಶಕರು ‘ಥುಡರಮ್’ ಕಥೆಯನ್ನು 2020ರಲ್ಲಿ ಬರೆದಿದ್ದ ‘ಥೀಯಟ್ಟಂ’ನಿಂದ ಕದ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸನಲ್ ಕುಮಾರ್ ಸಸಿಧರನ್, ‘ಥೀಯಟ್ಟಮ್’ ಸಿನಿಮಾದ ಕತೆಯನ್ನು 2020ರಲ್ಲಿ ಬರೆದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಮಾಡಿರಲಿಲ್ಲ. ಈಗ ನೋಡಿದರೆ ನನ್ನ ಕಥೆಯನ್ನೇ ಕದ್ದು ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಫೇಸ್ ಬುಕ್ ಪೋಸ್ಟ್ನಲ್ಲಿ ಸನಲ್ ಕುಮಾರ್ ಸಸಿಧರನ್, “ನಾನು ಕೂಡ ಈ ‘ಥುಡರಮ್’ ಚಿತ್ರವನ್ನು ನೋಡಿದೆ. ಚಿತ್ರ ನೋಡ್ತಿದ್ದ ಹಾಗೇ, ಇದು ನನಗೆ ‘ಥೀಯಟ್ಟಂʼರಿಂದ ಕದ್ದ ಕಥೆ ಎನಿಸಿತು. ಥುಡರಮ್ ನಿರ್ಮಾಪಕರಿಗೆ ಥೀಯಟ್ಟಂ ಚಿತ್ರದಲ್ಲಿನ ಸಾರವನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಇಲ್ಲದ ಕಾರಣ ಚಿತ್ರದ ಸಾರ ಹಾಗೆ ಉಳಿದಿದೆ.
ಜನ ಈ ಎರಡೂ ಸಿನಿಮಾವನ್ನು ನೋಡಿ ಹೋಲಿಕೆ ಮಾಡಿ ಕದ್ದ ಕಥೆಯೋ ಅಲ್ವೋ ಎಂದು ನಿರ್ಧರಿಸಬೇಕು. ಅದಕ್ಕಾಗಿ ನಾನು ಥೀಯಟ್ಟಂನ ಸಂಪೂರ್ಣ ಸ್ಕ್ರಿಪ್ಟ್ ಅನ್ನು ಫೇಸ್ಬುಕ್ನಲ್ಲಿ ರಿವೀಲ್ ಮಾಡುತ್ತೇನೆ ಎಂದು ಸಸಿಧರನ್ ಹೇಳಿಕೊಂಡಿದ್ದಾರೆ.
“ಚಿತ್ರಕತೆಯಲ್ಲಿ ಬದಲಾವಣೆ ಮಾಡಿದ್ದರೂ ಡೈಲಾಗ್, ಪಾತ್ರ ಹಾಗೆ ಇದೆ”
ಥೀಯಟ್ಟಂ ಮತ್ತು ತುಡರುಂ ಚಿತ್ರದಲ್ಲಿ ಇರುವ ಒಂದೇ ಕಥೆ ಎಳೆಯನ್ನು, ಡೈಲಾಗ್ಗಳನ್ನು, ಪಾತ್ರದ ಬಗೆಗಿನ ವಿವರಣೆಯನ್ನು ಸಹ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
“ಥೀಯಟ್ಟಂ ಕಥೆಯಲ್ಲಿ ನಾಯಕ ಆಟೋರಿಕ್ಷಾ ಚಾಲಕನಾಗಿದ್ದು, ಪೊಲೀಸರು ಆತನ ಮೇಲೆ ಕೊಲೆ ಆರೋಪ ಹೊರಿಸುತ್ತಾರೆ. ಇದೇ ರೀತಿ ಥುಡರಮ್’ನಲ್ಲಿ, ಮೋಹನ್ ಲಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬೀಳುವ ಕ್ಯಾಬ್ ಚಾಲಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವೆಲ್ಲಾ ಕದ್ದ ಕಥೆಗೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದ್ದಾರೆ.
“ನನ್ನ ಚಿತ್ರಕಥೆಯಲ್ಲಿರುವ ‘ಕೊನ್ನಲ್ ಪಾಪಂ ತಿನ್ನಲ್ ತಿರುಮ್’ ಎಂಬ ಅತ್ಯಗತ್ಯ ಸಂಭಾಷಣೆಯನ್ನು ಅಗತ್ಯವಿಲ್ಲದಿದ್ದರೂ ತುಡರುಂ ಚಿತ್ರದಲ್ಲಿ ನಿರ್ದೇಶಕರು ಸೇರಿಸಿದ್ದಾರೆ. ಖತರ್ನಾಕ್ ಕಳ್ಳನಾದ್ರೂ ಸಾಕ್ಷಿ ಬಿಟ್ಟು ಹೋಗುತ್ತಾನೆ ಅನ್ನೋದಕ್ಕೆ ಇದೇ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ.