ದೆಹಲಿ ವಾಯುಮಾಲಿನ್ಯ ಕುರಿತು ಚರ್ಚೆಗೆ ಮೋದಿ ಸರ್ಕಾರ ಸಮ್ಮತಿ; ರಾಹುಲ್ ಗಾಂಧಿ ಮನವಿಗೆ ಸ್ಪಂದನೆ

ನವದೆಹಲಿ: ಅಪರೂಪದ ಬೆಳವಣಿಗೆಯಲ್ಲಿ ದೆಹಲಿ ವಾಯುಮಾಲಿನ್ಯ (Delhi Air Pollution) ಬಗ್ಗೆ ಚರ್ಚೆಗೆ ರಾಹುಲ್ ಗಾಂಧಿ (Rahul Gandhi) ಮನವಿಗೆ ಮೋದಿ ಸರ್ಕಾರ ಸಮ್ಮತಿ ಸೂಚಿಸಿದೆ.


ಶೂನ್ಯವೇಳೆಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಸ್ಪಷ್ಟ ಚಿತ್ರಣ ಮುಂದಿಟ್ಟ ರಾಹುಲ್ ಗಾಂಧಿ ಲಕ್ಷಾಂತರ ಮಕ್ಕಳು ಶ್ವಾಸಕೋಶದ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧರು ಉಸಿರಾಡಲು ಕಷ್ಟಪಡುತ್ತಿದ್ದಾರೆ ಎಂದು ಸದನದ ಗಮನ ಸೆಳೆದರು. ಇದು ಸೈದ್ಧಾಂತಿಕ ವಿಷಯವಲ್ಲ, ಮಾಲಿನ್ಯದ ವಿಚಾರ ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಕಿರಣ್ ರಿಜಿಜು (Kiren Rijiju), ಸರ್ಕಾರವು ಈ ವಿಷಯದ ಕುರಿತು ಚರ್ಚೆಗೆ ಸಿದ್ಧವಾಗಿದೆ. ಲೋಕಸಭಾ ವ್ಯವಹಾರ ಸಲಹಾ ಸಮಿತಿಯಲ್ಲಿಯೂ ಗಮನಕ್ಕೆ ತರಲಾಗಿದೆ ಎಂದರು.
ಇನ್ನೂ ತಮಿಳುನಾಡಿನ ಕಾರ್ತಿಕ ದೀಪ ವಿಷಯವನ್ನ ಲೋಕಸಭೆಯಲ್ಲಿ ಸಂಸದ ಅನುರಾಗ್ ಠಾಕೂರ್ ಪ್ರಸ್ತಾಪಿಸಿದರು. ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಇತ್ತೀಚೆಗೆ ತಮಿಳುನಾಡು ಸರ್ಕಾರವನ್ನು ಛೀಮಾರಿ ಹಾಕಿದೆ. ಪೊಲೀಸರು ಹೈಕೋರ್ಟ್ ಆದೇಶಗಳನ್ನು ಏಕೆ ಪಾಲಿಸಲಿಲ್ಲ? ಹಿಂದೂಗಳನ್ನ ಏಕೆ ತಡೆಯಲಾಯಿತು? ತಮಿಳುನಾಡು ಸರ್ಕಾರ ಹೈಕೋರ್ಟ್ ನಿರ್ದೇಶನವನ್ನ ಪಾಲಿಸಿಲ್ಲ ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.

ತಿರುಪರನಕುಂದ್ರಂ ಬೆಟ್ಟದಲ್ಲಿ ದರ್ಗಾದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿದ್ದ ನ್ಯಾಯಾಧೀಶ ಜಿ.ಆರ್ ಸ್ವಾಮಿನಾಥನ್ ಅವರನ್ನ ಮಹಾಭಿಯೋಗ ಪ್ರಸ್ತಾವನೆ ಮೂಲಕ ತೆಗೆದುಹಾಕಲು ವಿರೋಧ ಪಕ್ಷ ಪ್ರಯತ್ನಿಸುತ್ತಿದೆ. ಇದನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಧೀಶರು ಸೇರಿದಂತೆ 56 ಮಾಜಿ ನ್ಯಾಯಮೂರ್ತಿಗಳು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರನ್ನು ಬೆಂಬಲಿಸಿ ಪತ್ರ ಬರೆದಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಶಶಿ ತರೂರ್ ಇವತ್ತು ರಾಹುಲ್ ಗಾಂಧಿ ಕರೆದಿದ್ದ ಕಾಂಗ್ರೆಸ್ ಸಂಸದರ ಸಭೆಗೆ ಗೈರಾಗಿದ್ದಾರೆ. ಸಂಸದೀಯ ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸಿದ ಈ ಸಭೆಗೆ ಎಲ್ಲಾ ಸಂಸದರನ್ನ ಆಹ್ವಾನಿಸಲಾಗಿತ್ತು.