16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ? ಸಿಎಂ ಸಿದ್ದರಾಮಯ್ಯ ನೀಡಿದ ಮಹತ್ವದ ಸುಳಿವು!

ಬೆಂಗಳೂರು: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸಲು ಚಿಂತನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಸುಳಿವು ಕೊಟ್ಟಿದ್ದಾರೆ.
16 ವರ್ಷದೊಳಗಿನ ಮಕ್ಕಳಿಗೆ ಶಾಲೆ ಹಾಗೂ ಕಾಲೇಜು ಕ್ಯಾಂಪಸ್ನಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಡ್ರಗ್ಸ್ಗೆ ಬಲಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆ ಕೂಡ ಅವರಿಗೆ ಹಾನಿ ಮಾಡುತ್ತಿದೆ. ಹೀಗಾಗಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಯೋಚನೆ ಇದೆ ಅಂತಾ ಸ್ಪಷ್ಟಪಡಿಸಿದ್ದಾರೆಕೊರೋನಾ ಕಾಲದಿಂದ ಆರಂಭವಾದ ಈ ಆನ್ಲೈನ್ ಪಾಠ. ಆನ್ಲೈನ್ ಟೀಚಿಂಗ್ ಪದ್ಧತಿ ವಿದ್ಯಾರ್ಥಿಗಳು ಮೊಬೈಲ್ಗೆ ಅಡಿಕ್ಟ್ ಆಗುವಂತೆ ಮಾಡಿದೆ. ಆದ್ರೀಗ ಈ ಗೀಳಿನಿಂದ ವಿದ್ಯಾರ್ಥಿಗಳನ್ನು ಹೇಗೆ ಹೊರಗೆ ತರುವುದು ಎಂಬುದು ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸೋಶಿಯಲ್ ಮೀಡಿಯಾ ಗೀಳು ಹೆಚ್ಚಾಗಿದೆ. ಮೊಬೈಲ್ ಗೀಳಿನಿಂದಾಗಿ ಮಾನಸಿಕ ಒತ್ತಡ, ನಿದ್ರೆ ಕೊರತೆ ಹಾಗೂ ಅಂಕಗಳಲ್ಲಿ ಕುಸಿತ ಕಾಣಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ವಿಷಯ ಪ್ರಸ್ತಾಪವಾಗಿದೆ.

ಅಂದಹಾಗೆ ಕೆಲವು ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಶಾಲಾ ಸಮಯದಲ್ಲಿ ಫೋನ್ ಬಳಕೆಗೆ ನಿಯಂತ್ರಣ ಹೇರಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಬ್ಯಾನ್ ಮಾಡುವ ಬಗ್ಗೆ ಸಲಹೆ ನೀಡಿ ಎಂದು ಕುಲಪತಿಗಳಿಂದ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಕೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ನಿರ್ಧಾರವನ್ನು ಪೋಷಕರು ಸ್ವಾಗತಿಸಿದ್ದಾರೆ. ಸರ್ಕಾರ ಸರಿಯಾಗಿ ಚಿಂತನೆ ನಡೆಸಿದೆ. ಇದನ್ನ ಕೂಡಲೇ ಜಾರಿ ಮಾಡಬೇಕು ಎಂದಿದ್ದಾರೆ. ಮೊಬೈಲ್ ಬಳಕೆಯಿಂದ ಕಣ್ಣುಗಳಿಗೆ ಹಾನಿ ಆಗ್ತಿದೆ. ಆನ್ಲೈನ್ನಲ್ಲಿ ಪಿಡಿಎಫ್ ನೋಡೊದಾದ್ರೆ ಬುಕ್ಸ್ ಯಾಕೆ? ಸ್ಕೂಲ್ ಕಾಲೇಜುಗಳಿಗೆ ಲಕ್ಷಾಂತರ ರೂಪಾಯಿ ಫೀಸ್ ಕಟ್ಟೋದು ಯಾಕೆ? ಅಂತ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಕರ್ನಾಟಕದಲ್ಲಿ ಶಾಲಾ-ಕಾಲೇಜು ಕ್ಯಾಂಪಸ್ಗಳಲ್ಲಿ ಮೊಬೈಲ್ ಫ್ರೀ ಝೋನ್ ಮಾಡಲು ಸರ್ಕಾರ ಮುಂದಾಗಿದ್ದು, ರೀಲ್ಸ್, ಸೋಶಿಯಲ್ ಮೀಡಿಯಾ ಗೀಳಿಗೆ ಕಡಿವಾಣ ಹಾಕುವ ಪ್ಲ್ಯಾನ್ ಆಗಿದೆ