ಕಾಣೆಯಾಗಿದ್ದವನು ಮತ್ತೆ ಮನೆ ಬಾಗಿಲಲ್ಲಿ: 62 ವರ್ಷಗಳ ನಂತರ ಮನೆ ಹುಡುಕಿ ಬಂದ ವೃದ್ಧ

ಬಂಟ್ವಾಳ: ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬಯಿಗೆ ತೆರಳಿದ್ದ ನರಿಕೊಂಬಿನ ವ್ಯಕ್ತಿಯೊಬ್ಬರು ಸುಮಾರು 62 ವರ್ಷಗಳ ಬಳಿಕ ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.
ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು.
ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೂ ಕಳೆದುಕೊಂಡಿದ್ದರು.
ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಬಂದು ಮನೆ ಮಂದಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ವರೆಗೆ ಎಲ್ಲಿದ್ದಿರಿ, ಈಗ ಯಾಕೆ ಬಂದಿರಿ? ಎಂಬಿತ್ಯಾದಿ ಮನೆಯವರ ಪ್ರಶ್ನೆಗಳಿಗೆ ಉತ್ತರಿಸಿ, ಮುಂಬಯಿಗೆ ಹೋದವನು ಹಲವಾರು ಕಡೆ ಕೆಲಸ ಮಾಡಿ ಬಳಿಕ ಯಾವುದೋ ಲಾರಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ 60 ವರ್ಷದ ಬಳಿಕ ಅಲ್ಲಿ ಕೆಲಸಕ್ಕೆ ಅವಕಾಶವಿರಲಿಲ್ಲ. ಮತ್ತೆ ಬೇರೆ ಬೇರೆ ಕೆಲಸ ಮಾಡಿ ಕಳೆದ 2ವರ್ಷಗಳಿಂದ ಮುಂಬಯಿಯ ಹೊಟೇಲೊಂದರಲ್ಲಿದ್ದೆ. ಆದರೆ ಅದರ ಮಾಲಕ ಸಂಬಳವನ್ನೇ ಕೊಟ್ಟಿಲ್ಲ. ಹೀಗಾಗಿ ಜೂ. 4ರಂದು ಬಸ್ಸಿನಲ್ಲಿ ಮುಂಬಯಿಯಿಂದ ಹೊರಟು ಮಂಗಳೂರಿಗೆ ಆಗಮಿಸಿದೆ. ಅಲ್ಲಿಂದ ಪಾಣೆಮಂಗಳೂರಿಗೆ ಬಂದು ನರಿಕೊಂಬಿಗೆ ಬಂದಿದ್ದೇನೆ ಎಂದು ಮನೆಮಂದಿಗೆ ತಿಳಿಸಿದ್ದಾರೆ