ಅಶ್ಲೀಲ ಮೆಸೇಜ್ ಆರೋಪದ ಮೇಲೆ ಅಪ್ರಾಪ್ತರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ: ಬಾಲಕ ಆತ್ಮಹತ್ಯೆಗೆ ಯತ್ನ

ಗದಗ: ಮೂವರು ಅಪ್ರಾಪ್ತ ದಲಿತ ಯುವಕರನ್ನು ಗ್ರಾಮ ಪಂಚಾಯತಿಯ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಸುಮಾರು 60 ಸವರ್ಣೀಯರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಹುಡುಗಿಗೆ ಅಶ್ಲೀಲ ಮೆಸೇಜ್ ಮತ್ತು ಚುಡಾಯಿಸಿದ್ದಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಯಿಂದ ಮೈ ತುಂಬಾ ಬಾಸುಂಡೆ ಬರುವಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣ ದಾಖಲಾಗುವ ಮುನ್ನ ಎರಡು ಕಡೆಯಿಂದ ರಾಜಿ ಮಾಡಿಕೊಂಡಿರು ಬಗ್ಗೆ ಹಿಂಬರಹ ನೀಡಲಾಗಿತ್ತಂತೆ. ಆದರೆ ಹಲ್ಲೆಗೊಳಗಾದ ಬಾಲಕನೊಬ್ಬ ಅವಮಾನ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಅಂತ ದಲಿತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಸವರ್ಣೀಯರಿಂದಲೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.