ಟಿಪ್ಪರ್ ಅಡಿ ಸಿಲುಕಿ ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಸಾವು; ಮತ್ತೊಬ್ಬಳ ಸ್ಥಿತಿ ಗಂಭೀರ

ಯಾದಗಿರಿ/ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಟಿಪ್ಪರ್ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ವೈದ್ಯ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕೃತಿಕಾ(21) ಸ್ಥಳದಲ್ಲೇ ಪ್ರಾಣಬಿಟ್ಟಿದ್ದರೆ, ಹಂಸ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ಸಂಜೆ ಕಾಲೇಜು ಮುಗಿಸಿ ಕೃತಿಕಾ ಮತ್ತು ಹಂಸ ತೆರಳುತ್ತಿದ್ದರು. ಈ ವೇಳೆ ಅವಘಾತ ನಡೆದಿದ್ದು, ಸವಾರರು ನೆಲಕ್ಕೆ ಬಿದ್ದಿದ್ದಾರೆ. ಟಿಪ್ಪರ್ ಹರಿದ ಪರಿಣಾಮ ಕೃತಿಕಾ ದುರ್ಮರಣ ಹೊಂದಿದ್ದರೆ, ಗಂಭೀರ ಗಾಯಗೊಂಡ ಹಂಸಗೆ ಆರ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆ ಎಕ್ಸಿಟ್ ಗೇಟ್ನಲ್ಲಿ ಘಟನೆ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿಗೆ ಡಿಕ್ಕಿ ಆಗಿ ಅಪಘಾತ ನಡೆದಿದೆ. ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಕೃತಿಕಾ ಮೃತಪಟ್ಟಿದ್ದರೆ, ವಾಹನ ಚಲಾಯಿಸುತ್ತಿದ್ದ ಮತ್ತೋರ್ವಳಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಎಂದು ಅವರು ತಿಳಿಸಿದ್ದಾರೆ.