ವೈದ್ಯಕೀಯ ಲೋಕದ ಭೀಕರ ನಿರ್ಲಕ್ಷ್ಯ: ರಕ್ತ ವರ್ಗಾವಣೆ ಬಳಿಕ ನಾಲ್ವರು ಮಕ್ಕಳಿಗೆ ಎಚ್ಐವಿ ಸೋಂಕು; ವೈದ್ಯರು ಹಾಗೂ ಸಿಬ್ಬಂದಿ ಅಮಾನತು

ಮಧ್ಯಪ್ರದೇಶ: ಸತ್ನಾ ಜಿಲ್ಲೆಯ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಕ್ಕಳಿಗೆ ಆಸ್ಪತ್ರೆಯ ರಕ್ತ ನಿಧಿಯಿಂದ ರಕ್ತ ವರ್ಗಾವಣೆ ಮಾಡಿದ ನಂತರ ಎಚ್ಐವಿ (HIV) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಥಲಸ್ಸೇಮಿಯಾದಂತಹ ಅನುವಂಶಿಕ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದ ಈ ಮಕ್ಕಳಿಗೆ ನಿಯಮಿತವಾಗಿ ರಕ್ತ ವರ್ಗಾವಣೆಯ ಅಗತ್ಯವಿದ್ದು, ಡಿಸೆಂಬರ್ 16ರಂದು ನಡೆಸಿದ ತಪಾಸಣೆಯ ವೇಳೆ ಈ ನಾಲ್ವರು ಮಕ್ಕಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.


ಈ ಗಂಭೀರ ವೈದ್ಯಕೀಯ ಲೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ರಕ್ತ ನಿಧಿಯ ಉಸ್ತುವಾರಿ ವೈದ್ಯರು ಹಾಗೂ ಪ್ರಯೋಗಾಲಯದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಅಲ್ಲದೆ, ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್ ಡಾ. ಮನೋಜ್ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮಾರ್ಗಸೂಚಿಗಳ ಪ್ರಕಾರ ಪ್ರತಿಯೊಂದು ರಕ್ತದ ಮಾದರಿಯನ್ನು ಪರೀಕ್ಷಿಸುವುದು ಕಡ್ಡಾಯವಾಗಿದ್ದರೂ, ಸೋಂಕಿತ ರಕ್ತವನ್ನು ಮಕ್ಕಳಿಗೆ ನೀಡಿದ್ದು ಹೇಗೆ ಎಂಬ ಬಗ್ಗೆ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗಳ ಜಂಟಿ ತಂಡ ತನಿಖೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದ ಹೊರಗೆ ಅಕ್ರಮವಾಗಿ ರಕ್ತ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಈ ಅಕ್ರಮ ಜಾಲಕ್ಕೂ ಮತ್ತು ಪ್ರಸ್ತುತ ಅವಘಡಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.
