ಸಿಎಂ ಜೊತೆಗೆ ಸಂಧಾನ ವಿಫಲ: ನಾಳೆ ಸಾರಿಗೆ ಮುಷ್ಕರ ಖಚಿತ, ಇಂದಿನಿಂದಲೇ ಬಸ್ ಸಂಚಾರ ಸ್ಥಗಿತ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗಿನ ಸಾರಿಗೆ ಒಕ್ಕೂಟದ ಸಂಧಾನ ಸಭೆ ವಿಫಲವಾಗಿದ್ದು ನಾಳೆ ಸಾರಿಗೆ ಮುಷ್ಕರ ನಡೆಯಲಿದೆ.

1.15 ಲಕ್ಷ ಸರ್ಕಾರಿ ಸಾರಿಗೆ ನೌಕರ ಬಂದ್ ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿವೇಶನದ ನಂತರ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಆಫರ್ ಅನ್ನು ತಿರಸ್ಕರಿಸಿದ ಒಕ್ಕೂಟದ ನಾಯಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ
ಸಭೆಯ ಬಳಿಕ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಮಾತನಾಡಿ, 24 ತಿಂಗಳ ಹಿಂಬಾಕಿ ನೀಡಲು ಸಾಧ್ಯವಿಲ್ಲ. 14 ತಿಂಗಳು ಆರಿಯರ್ಸ್ ಕೊಡುತ್ತೇವೆ ಎಂದು ಸಿಎಂ ತಿಳಿಸಿದರು. ಮುಂದಿನ ವೇತನ ಪರಿಷ್ಕರಣೆ ಬಗ್ಗೆಯೂ ನಮಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.
