ಮದುವೆಯಾದ ಯುವತಿಯನ್ನು ಗೋಣಿಯಲ್ಲಿ ಹೊತ್ತೊಯ್ದ ಪೋಷಕರು

ಹುಬ್ಬಳ್ಳಿ :ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಬಲವಂತವಾಗಿ ಹೊತ್ತೊಯ್ದಿರುವಂತಹ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಬೈರಿಕೊಪ್ಪ ಗ್ರಾಮದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೋಡಿ ಎರಡು ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಮದುವೆಗೆ ಪೋಷಕರ ವಿರೋಧವಿತ್ತು. ಇದರಿಂದ ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು.
ಆದರೆ ಸುಷ್ಮಾ ಪ್ರೀತಿಸಿದ ವ್ಯಕ್ತಿಯನ್ನು ಬಿಟ್ಟು ಇರಲಾಗದೆ ನಿರಂಜನ್ ಮನೆಗೆ ಹೋಗಿದ್ದಳು. ಈ ವಿಚಾರ ತಿಳಿದ ಯುವತಿಯ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್ಗೆ ಧಮ್ಕಿ ಹಾಕಿ ಸುಷ್ಮಾಳನ್ನು ಗೋಣಿ ಚೀಲದಲ್ಲಿ ತುಂಬಿ ಬಲವಂತವಾಗಿ ಹೊತ್ತೊಯ್ದಿದ್ದಾರೆ.
ಇದೀಗ ಘಟನೆ ಬಗ್ಗೆ ನಿರಂಜನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ಹಾಗೂ ತನ್ನ ರಕ್ಷಣೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.