ಮರಾಠಿ ವಿಚಾರಕ್ಕೆ ಗದ್ದಲ – ಎಂಎನ್ಎಸ್ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲದೆ ಕಾರ್ಯಕರ್ತರ ಬಂಧನ

ಮುಂಬೈ: ರಾಜ್ ಥಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಸಂಘಟನೆಯ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ಧಾರೆ. ಮರಾಠಿಯೇತರರ ಪ್ರತಿಭಟನೆಗೆ ಪ್ರತಿಯಾಗಿ ಮೆರವಣಿಗೆ ನಡೆಸಲು ಥಾಣೆ ನಗರದ ಮೀರಾ ರೋಡ್ನಲ್ಲಿ ಸೇರಿದ್ದ ಎಂಎನ್ಎಸ್ ಕಾರ್ಯಕರ್ತರನ್ನು ತಡೆಯಲಾಗಿದೆ. ಮೆರವಣಿಗೆಗೆ ಅನುಮತಿ ಪಡೆಯಲಾಗಿಲ್ಲದಿರುವುದರಿಂದ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಯಾಕೆ ಈ ಮೆರವಣಿಗೆ?
ಮರಾಠಿ ಭಾಷೆ ಮಾತನಾಡದೇ ಇದ್ದದ್ದಕ್ಕೆ ಹೋಟೆಲ್ ಮಾಲೀಕರೊಬ್ಬರನ್ನು ಎಂಎನ್ಎಸ್ ಕಾರ್ಯಕರ್ತರು ಥಳಿಸಿದ್ದರು. ಅದನ್ನು ವಿರೋಧಿಸಿ ಮರಾಠಿಯೇತರ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಮೊದಲಾದ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ಆದರೆ, ಈ ಮೆರವಣಿಗೆಗೆ ಅನುಮತಿ ಪಡೆಯಲಾಗಿಲ್ಲ ಎನ್ನುವುದು ಆಡಳಿತದ ಹೇಳಿಕೆ.

ಎಂಎನ್ಎಸ್ನ ಥಾಣೆ ಮತ್ತು ಪಾಲ್ಘರ್ ವಿಭಾಗದ ಮುಖ್ಯಸ್ಥ ಅವಿನಾಶ್ ಜಾಧವ್ ಅವರನ್ನು ಇಂದು ಮಂಗಳವಾರ ಮುಂಜಾವು 3:30ಕ್ಕೆ ಅವರ ನಿವಾಸದಿಂದಲೇ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮರಾಠಿಯೇತರರು ಹೆಚ್ಚಾಗಿ ನೆಲಸಿರುವ ಮೀರಾ ರೋಡ್ನಿಂದಲೇ ಎಂಎನ್ಎಸ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೀರಾ ರೋಡ್ನಲ್ಲಿ ಸೇರಿದ್ದ ಹಲವು ಕಾರ್ಯಕರ್ತರನ್ನು ಪೊಲೀಸರು ಡೀಟೇನ್ ಮಾಡಿಕೊಂಡಿದ್ದಾರೆ.
ಪರಿಸ್ಥಿತಿ ಅತಿರೇಕಕ್ಕೆ ಹೋಗುವುದರಿಂದ ತಡೆಯಲು ಪೊಲೀಸರು ಮುನ್ನೆಚ್ಚರಿಕೆಯಾಗಿ ಈ ಕ್ರಮ ಜರುಗಿಸಿದ್ದಾರೆ. ಪೊಲೀಸರ ಕ್ರಮವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾವುದೇ ಸಂಘಟನೆಯೂ ಪ್ರತಿಭಟನೆ ನಡೆಸುವ ಹಕ್ಕು ಹೊಂದಿರುತ್ತದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು. ಟ್ರಾಫಿಕ್ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆಯ ಮಾರ್ಗವನ್ನು ಸರಿಯಾಗಿ ಯೋಜಿಸಬೇಕು’ ಎಂದು ಸಿಎಂ ಫಡ್ನವಿಸ್ ತಿಳಿಸಿದ್ದಾರೆ.