ಮಂಗಳೂರು: ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಲಂಚದ ಆಮಿಷ ಒಡ್ಡಿದ ಅಧಿಕಾರಿಯ ಬೃಹತ್ ವಿಚಾರಣೆ

ಮಂಗಳೂರು: ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಲೋಕಾಯುಕ್ತ ಪೊಲೀಸರಿಗೇ ಲಂಚದ ಆಮಿಷವೊಡ್ಡಿದ ಅಧಿಕಾರಿಯೊಬ್ಬನ ಈಗ ಲೋಕಾಯುಕ್ತರ ಅತಿಥಿಯಾದ ವಿಚಿತ್ರ ಘಟನೆಯೊಂದು ಶುಕ್ರವಾರ ನಡೆದಿದೆ.
ಶುಕ್ರವಾರ ಪೂರ್ವಾಹ್ನ 11.15ರ ವೇಳೆಗೆ ಲೊಕಾಯುಕ್ತ ಪೊಲೀಸ್ ಠಾಣೆಗೆ ಕೋಟೆಕಣಿ ಪ್ರಶಾಂತ್ ಆಯಿಲ್ ಇಂಡಸ್ಟ್ರೀಸ್ ಮಾಲಕ ಪ್ರವೀಣ್ ನಾಯ್ಕ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ಭೇಟಿ ನೀಡಿದ್ದಾರೆ.
ಠಾಣೆಗೆ ಬಂದ ಅವರು ಪೊಲೀಸ್ ನಿರೀಕ್ಷಕರನ್ನು ಭೇಟಿಯಾಗಬೇಕು ಎಂದು ಸಿಬಂದಿಯಲ್ಲಿ ತಿಳಿಸಿದ್ದಾರೆ. |
ಅನಂತರ ನಿರೀಕ್ಷಕಿ ಭಾರತಿಯವರ ಜಿ. ಅವರ ಜತೆ ಗಜೇಂದ್ರ ಮಾತನಾಡುತ್ತಾ, ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ತಾನು 3 ತಿಂಗಳಿಗೊಮ್ಮೆ 25,000 ರೂ.ಹಣವನ್ನು ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ಲಂಚದ ಅಮಿಷ ಒಡ್ಡಿದ್ದಾನೆ.
ಆತನ ಮೇಲೆ ಅನುಮಾನ ಬಂದು ಆತ ಮಾತನಾಡಿರುವುದನ್ನು ಮೊದಲೇ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆ ಆತ ಲಂಚ ಕೊಡುವುದಾಗಿ ಹೇಳಿದ್ದನ್ನು ಕೇಳಿ ಅಧಿಕಾರಿಗಳು ಒಮ್ಮೆಲೇ ದಂಗಾಗಿದ್ದಾರೆ. ಇದೀಗ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ವೇಳೆ ಆತನ ಜತೆ ಬಂದ ವ್ಯಕ್ತಿ ಹೊರಗಿನಿಂದಲೇ ಎಸ್ಕೇಪ್ ಆಗಿದ್ದಾನೆ.
ಲೋಕಾಯುಕ್ತ ಠಾಣೆಯ ಠಾಣಾಧಿಕಾರಿಗೆ ಲಂಚ ಹಣ ನೀಡುವುದಾಗಿ ಆಮೀಷ ಒಡ್ಡಿದ ಸರಕಾರಿ ಅಧಿಕಾರಿ ಗಜೇಂದ್ರ ವಿ. ಎಡಕೆ ಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು, ಆತನ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಮಂಗಳೂರು ವಿಭಾಗದ ಪೊಲೀಸ್ ಅಧಿಧೀಕ್ಷಕರು (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕರಾದ ಡಾ| ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಹಾಗೂ ಸಿಬಂದಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸರಕಾರಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸುವ ಕಾರ್ಯಾಚರಣೆ ಎಲ್ಲ ಕಡೆ ನಡೆಯುತ್ತದೆ. ಆದರೆ ಇದೇ ಮೊದಲ ಬಾರಿಗೆ ಒಬ್ಬ ಸರಕಾರಿ ಅಧಿಕಾರಿ ಲೋಕಾಯುಕ್ತ ಕಚೇರಿಗೇ ಬಂದು ಲೋಕಾಯುಕ್ತ ಪೊಲೀಸರಿಗೇ ಲಂಚದ ಆಮಿಷ ಒಡ್ಡಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.
– ಕುಮಾರಚಂದ್ರ
ಪೊಲೀಸ್ ಅಧೀಕ್ಷಕರು (ಪ್ರಭಾರ), ಲೋಕಾಯುಕ್ತ ಮಂಗಳೂರು ವಿಭಾಗ