ಮಂಗಳೂರು ಗುಡ್ಡ ಕುಸಿತ ದುರಂತ – ಅವೈಜ್ಞಾನಿಕ ಕಾಮಗಾರಿ ವಿರುದ್ಧ ದೂರು

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಬಲು ಜೋರಾಗಿದೆ. ಮಳೆಯ ಹೊಡೆತಕ್ಕೆ ಅಲ್ಲಿನ ಗುಡ್ಡಗಳೇ ನೆಲಕಚ್ಚುತ್ತಿದ್ದು, ಮಂಜನಾಡಿಯ ಮೋಂಟೆಪದವು ಗುಡ್ಡಕುಸಿತದಿಂದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯೇ ಕಾರಣವೆಂಬ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಮಂಜನಾಡಿಯ ಮೋಂಟೆಪದವು ಗುಡ್ಡಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಈ ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗಾಯಾಳು ಅಶ್ವಿನಿ ಸಹೋದರ ತೇಜು ಕುಮಾರ್ ಆರೋಪ ಮಾಡಿದ್ದಾರೆ.
ಈ ಕುರಿತಾಗಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ಸಹ ನೀಡಿರುವ ತೇಜು ಕುಮಾರ್, ಮಂನಾಡಿ ಗ್ರಾಮ ಪಂಚಾಯಿತಿ ಪಿಡಿಓ ಚೈತ್ರಾ, ಕೆಆರ್ಡಿಐಎಲ್ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್ಗಳು ಕಾರಣ ಎಂದು ಆರೋಪಿಸಿದ್ದಾರೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರಿನಲ್ಲೇನಿದೆ?
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿ ಎಂಬಲ್ಲಿ ನನ್ನ ಅಕ್ಕ ಅಶ್ವಿನಿ ಎಂಬುವವರನ್ನು ಮಂಜನಾಡಿ ಗ್ರಾಮದ ಉರುಮಾನ ಕೋಡಿ ಮನೆಯ ಸೀತಾರಾಮ್ ಎನ್ನುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ನನ್ನ ಅಕ್ಕ ಮತ್ತು ಭಾವ ಅದರ ತಂದೆ ತಾಯಿ ಇಬ್ಬರು ಮಕ್ಕಳೊಂದಿಗೆ ಆ ಮನೆಯಲ್ಲಿ ವಾಸವಾಗಿದ್ದರು.
ಮೇ 30ರ ಬೆಳಿಗ್ಗೆ 3.30 ಗಂಟೆಗೆ ಸುರಿದ ಮಳೆಯಿಂದ ನನ್ನ ಭಾವ ಸೀತಾರಾಮರ ಮನೆ ಮೇಲೆ ಗುಡ್ಡ ಕುಸಿದು ನನ್ನ ಭಾವನ ತಂದೆ ಕಾಂತಪ್ಪ ಪೂಜಾರಿ ಕಾಲು ತುಂಡಾಗಿದೆ. ಆಕ್ಕನ ಮಕ್ಕಳದಾದ ಆರ್ಯನ್ (3) ವರ್ಷ ಹಾಗೂ ಆರುಷ್(ವರ್ಷ 6 ತಿಂಗಳ ಮಗು) ಹಾಗೂ ನನ್ನ ಭಾವನ ಅಮ್ಮ ಪ್ರೇಮ ಪೂಜಾರಿ ಮನೆಯ ಅಡಿಯಲ್ಲಿ ಮೃತ ಪಟ್ಟಿದ್ದಾರೆ. ನನ್ನ ಭಾವ ಸೀತಾರಾಮ ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಈ ದೂರಿನ ಸಾರಂಶ ಏನೆಂದರೆ ನನ್ನ ಅಕ್ಕ ಭಾವ ಅವರ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಮನೆಯ ಹಿಂದೆ ಗುಡ್ಡ ಇದ್ದು, ಗುಡ್ಡದ ಮೇಲೆ ರಸ್ತೆ ಕಾಮಗಾರಿ ನಡೆಸಿದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು ಕೈಗೊಂಡಿರುತ್ತಾರೆ. ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ಗಳು ನಡೆಸಿದ ‘ಅವೈಜ್ಞಾನಿಕ ರಸ್ತೆ ಹಾಗೂ ನಿರ್ಲಕ್ಷದ ಕಾಮಗಾರಿಯಿಂದ ಎರಡು ಮಕ್ಕಳು ಸಹಿತ ಮೂರು ಸಾವು ಸಂಭವಿಸಿದ್ದು, ನನ್ನ ಭಾವನ ತಂದೆಯವರ ಎರಡು ಕಾಲೂ ಮುರಿದಿದ್ದು ನನ್ನ ಅಕ್ಕ ಗಂಭೀರವಾಗಿ ಗಾಯಗೊಂಡು ದೇರಳಕಟ್ಟೆಯ ಜಸ್ಟಿಸ್ ಕೆಯಸ್ ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲು ಆಗಿದ್ದಾರೆ.
ಆದ್ದರಿಂದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು ಸಾವು ನೋವು ಸಂಭವಿಸುವ ಸಾಧ್ಯತೆ ಬಗ್ಗೆ ತಿಳಿದಿದ್ದು ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದ ಕಾಮಗಾರಿಯ ಕೃತ್ಯದಿಂದ ಘೋರ ಸಾವು ನೋವಿಗೆ ಕಾರಣ ಆದ ಅಧಿಕಾರಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ತೇಜು ಕುಮಾರ್ ಕೋರಿದಿದ್ದಾರೆ.