ಮೀನು ಹಿಡಿಯಲು ಹೋಗಿ ಸಾವನ್ನು ಎಳೆದುಕೊಂಡ ವ್ಯಕ್ತಿ

ತಮಿಳುನಾಡು : ಕೆಲವೊಮ್ಮೆ ಸಾವು ಹೇಗೆ ಬರುತ್ತದೆ ಎಂದು ಹೇಳಲಾಗದು ಅದೇ ರೀತಿ ಇಲ್ಲೊಬ್ಬರು ಮೀನಿನಿಂದಾಗಿ ಸಾವು ಕಂಡಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಮೂಲದ 29 ವರ್ಷದ ವ್ಯಕ್ತಿ ಮಣಿಕಂಡನ್ ಸಾವಿಗೀಡಾದ ವ್ಯಕ್ತಿ. ಇವರು ಸ್ಥಳೀಯ ಕೆರೆಯೊಂದರಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಹಿಡಿದ ಮೀನೊಂದನ್ನು ಬಾಯೊಳಗೆ ಹಾಕಿದ್ದು, ಈ ಮೀನು ಗಂಟಲಿನತ್ತ ಹೊರಳಿಕೊಂಡು ಉಸಿರುಕಟ್ಟಿದ ಪರಿಣಾಮ ಮಣಿಕಂಡನ್ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .ಮದುರನ್ತಕಮ್ ಪ್ರದೇಶದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ನಿವಾಸಿ ಮಣಿಕಂಡನ್ ಅರ್ಯಪಕ್ಕಂ ನಿವಾಸಿಯಾಗಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಮಣಿಕಂಡನ್ ಆ ಪ್ರದೇಶದಲ್ಲಿ ತಮ್ಮ ಬರಿಗೈಲಿ ಮೀನು ಹಿಡಿಯುವ ಅಭ್ಯಾಸದಿಂದಲೇ ಹೆಸರುವಾಸಿಯಾಗಿದ್ದರು. ಎಂದಿನಂತೆ ಅವರು ನೀರು ಕಡಿಮೆ ಇದ್ದಂತಹ ಕೀಳವಳಮ್ ಕೆರೆಗೆ ನೀರು ಹಿಡಿಯಲು ಹೋಗಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮಣಿಕಂಡನ್ ಮೊದಲಿಗೆ ಒಂದು ಮೀನು ಹಿಡಿದಿದ್ದಾರೆ. ಈ ವೇಳೆ ಇನ್ನೊಂದು ಮೀನನ್ನು ಇದೇ ಸಮಯದಲ್ಲಿ ಹಿಡಿದಿದ್ದು, ಮೊದಲು ಹಿಡಿದ ಮೀನನ್ನು ತಪ್ಪಿಸಿಕೊಂಡು ಹೋಗದಂತೆ ಬಾಯಲ್ಲಿ ತುಂಬಿಸಿದ್ದಾನೆ. ಸ್ಥಳೀಯವಾಗಿ ಪಣಂಗೊಟೈ ಎಂದು ಕರೆಯಲ್ಪಡುವ ಜೀವಂತ ಮೀನು ಇದಾಗಿದ್ದು, ಹೊರಳುತ್ತಾ ಮಣಿಕಂಡನ್ನ ಗಂಟಲಿನತ್ತ ಹೋಗಿ ಸಿಲುಕಿಕೊಂಡಿದೆ. ಜೊತೆಯಲ್ಲಿದ್ದವರು ಆತನ ಸಹಾಯಕ್ಕೆ ಧಾವಿಸಿದರಾದರೂ ಮೀನನ್ನು ಗಂಟಲಿನಿಂದ ಹೊರತೆಗೆಯುವಲ್ಲಿ ವಿಫಲರಾದರು. ಏಕೆಂದರೆ ಈ ಮೀನು ಮೊನಚಾದ ಮುಳ್ಳನ್ನು ಹೊಂದಿದ್ದು, ಅಪಾಯದಲ್ಲಿರುವ ಸಮಯದಲ್ಲಿ ಈ ಮುಳ್ಳನ್ನು ಹೊರಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಸಿಲುಕಿದ ಮೀನನ್ನು ಹೊರತೆಗೆಯಲಾಗಲಿಲ್ಲ, ಪರಿಣಾಮ ಮಣಿಕಂಡನ್ ಗಂಟಲಿನಲ್ಲಿ ಮೀನು ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ. ಕೂಡಲೇ ಮಣಿಕಂಡನ್ನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದರು. ಯುವಕನ ಸಾವಿಗೆ ಕಾರಣವಾಗಿರುವ ಪಣಂಗೊಟ್ಟೈ ಮೀನನ್ನು ಇಂಗ್ಲಿಷ್ನಲ್ಲಿ ಕ್ಲೈಂಬಿಂಗ್ ಪರ್ಚ್ (ಅನಾಬಾಸ್ ಟೆಸ್ಟುಡಿನಿಯಸ್) ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಉಭಯಚರ ಸಿಹಿನೀರಿನ ಮೀನಾಗಿದೆ. ತೇವಾಂಶ ಇರುವಾಗ ನೀರಿನಿಂದ ಹೊರಗೆ ಬದುಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಈ ಮೀನನ್ನು ಈ ಪ್ರದೇಶದಲ್ಲಿ ಆಹಾರದ ಮೂಲವಾಗಿ ಪರಿಗಣಿಸಲಾಗುತ್ತದೆ. ಇದರ ಚೂಪಾದ, ಮುಳ್ಳು ರೆಕ್ಕೆಗಳನ್ನು ಇದು ತನ್ನ ರಕ್ಷಣೆಗಾಗಿ ಬಳಸುತ್ತದೆ. ಹೀಗಾಗಿ ಇದನ್ನು ಹಿಡಿಯುವ ವೇಳೆ ತಪ್ಪಾಗಿ ನಿರ್ವಹಿಸಿದರೆ ಅದು ಅಪಾಯಕಾರಿಯಾಗಬಹುದು, ಇದು ಮಾರಕ ಉಸಿರುಗಟ್ಟಿಸುವ ಘಟನೆಗೆ ಕಾರಣವಾಗಬಹುದು.