ಆಟಿಕೆ ಪಿಸ್ತೂಲ್ ಬಳಸಿ ಕಾರ್ಮಿಕರ ಬೆದರಿಸುತ್ತಿದ್ದ ಭೂಪ

ಹಾಸನ:ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವೆಂಕಟಹಳ್ಳಿ ಗ್ರಾಮದಲ್ಲಿ ಮೇಸ್ತ್ರಿಯೊಬ್ಬ ಆಟಿಕೆ ಪಿಸ್ತೂಲ್ ಹಿಡಿದು ಕೂಲಿ ಕಾರ್ಮಿಕರಿಗೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಸ್ಸಾಂ ಮೂಲದ ಫುಲ್ಬಾಬು ಎಂಬಾತ ಅಸ್ಸಾಂ ಮೂಲದವರೇ ಆದ ಕೂಲಿ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಪ್ರಕರಣ ಹನುಬಾಳು ಸಮೀಪವಿರುವ ಪ್ರತಾಪ್ ಅವರ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ಫುಲ್ ಬಾಬು ಅಲ್ಲಿ ಮೇಸ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಅವರ ಜೊತೆ ಕೆಲಸ ಮಾಡುತ್ತಿದ್ದ 6 ಮಂದಿ ಕಾರ್ಮಿಕರಿಗೆ, ‘ಹೀಗೆ ಕೆಲಸ ಮಾಡಬೇಕು’ ಎಂದು ಕೈಯಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿರುವ ದೃಶ್ಯ ಎಸ್ಟೇಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ನಕಲಿ ಪಿಸ್ತೂಲ್ – ಪೊಲೀಸರ ಸ್ಪಷ್ಟನೆ:
ಸಿಸಿಟಿವಿ ದೃಶ್ಯ ಆಧರಿಸಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಫುಲ್ಬಾಬುವನ್ನು ಕರೆಸಿ ವಿಚಾರಣೆ ನಡೆಸಿದಾಗ, ಆತನ ಬಳಿ ಇದ್ದದ್ದು ಪಿಸ್ತೂಲ್ ನಕಲಿ ಎಂಬ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಫುಲ್ಬಾಬುಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಮಾನಸಿಕ ಅಶಾಂತಿ ಉಂಟುಮಾಡುವ ಈ ರೀತಿಯ ವರ್ತನೆಯ ವಿರುದ್ಧ ರಾಜ್ಯದ ಹಲವು ಕಾರ್ಮಿಕ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿದೆ.