ಚೆನ್ನೈ ಆಸ್ಪತ್ರೆಯಲ್ಲಿ ಭಾರೀ ಎಡವಟ್ಟು – ಬಾಯಿ ಹುಣ್ಣಿಗೆ ಬಂದ ಬಾಲಕನಿಗೆ ಸುನ್ನತಿ ಶಸ್ತ್ರಚಿಕಿತ್ಸೆ!

ಚೆನ್ನೈ:ಕೆಲವೊಮ್ಮೆ ಜೀವ ಉಳಿಸುವ ವೈದ್ಯರು ಎಡವಟ್ಟು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಾರೆ. ಅಂತಹ ಎಷ್ಟೋ ಘಟನೆಗಳು ಈ ಹಿಂದೆ ವರದಿಯಾಗಿತ್ತು. ಇದೀಗ ಅಂತಹದೇ ಒಂದು ಘಟನೆ ಚೆನ್ನೈನಲ್ಲಿ ದಾಖಲಾಗಿದೆ. ಬಾಯಿ ಹುಣ್ಣಿನಿಂದ ಬಳಲುತ್ತಿದ್ದ ಬಾಲಕನೊಬ್ಬನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದರೆ ವೈದ್ಯರು ಹುಣ್ಣಿಗೆ ಮದ್ದು ನೀಡುವ ಬದಲು ಆತನಿಗೆ ಸುನ್ನತಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಈ ಸುದ್ದಿ ಈಗ ವೈರಲ್ ಆಗಿದೆ.
ವರದಿ ಪ್ರಕಾರ, ಒಂಬತ್ತು ವರ್ಷದ ಬಾಲಕ ಬಾಯಿ ಹುಣ್ಣಿಗೆ ಚಿಕಿತ್ಸೆ ಪಡೆಯಲು ತನ್ನ ತಂದೆಯೊಂದಿಗೆ ಆಸ್ಪತ್ರೆಗೆ ಬಂದಿದ್ದ. ತಂದೆ ಇಲ್ಲದ ಸಮಯದಲ್ಲಿ ವೈದ್ಯರು ಬಾಲಕನನ್ನು ಸುನ್ನತಿ ಮಾಡಿಸಿಕೊಳ್ಳಬೇಕಾದ ಬೇರೊಬ್ಬ ರೋಗಿಯೆಂದು ತಪ್ಪಾಗಿ ಭಾವಿಸಿ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿ ಸುನ್ನತಿ ಮಾಡಿಸಿದ್ದಾರೆ. ಈ ಘಟನೆಯ ಬಗ್ಗೆ ತಿಳಿದ ನಂತರ, ಬಾಲಕನ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿ, ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ಪೊಲೀಸರು ಬಾಲಕನಿಗೆ ಸುನ್ನತಿ ಮಾಡಿದ ವೈದ್ಯ ಮೊಹಮ್ಮದ್ ಓವೈಸಿ (24) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಡಾ. ಓವೈಸಿ ವಿರುದ್ಧ ಬಿಎನ್ಎಸ್ ಸೆಕ್ಷನ್ 125 (2) (ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಮತ್ತು 351 (3) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಈ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೂಡ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯರು ಈ ರೀತಿಯಲ್ಲಿ ಎಡವಟ್ಟು ಮಾಡಿದ ಪ್ರಕರಣ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು 4 ವರ್ಷದ ಬಾಲಕಿಯ ಬೆರಳಿನ ಶಸ್ತ್ರಚಿಕಿತ್ಸೆಗೆ ಬದಲಾಗಿ ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ನಡೆದಿತ್ತು. ನಾಲ್ಕು ವರ್ಷದ ಬಾಲಕಿಗೆ ಕೈಯಲ್ಲಿ ಆರು ಬೆರಳುಗಳಿದ್ದವು. ಆ ಆರನೇ ಬೆರಳನ್ನು ತೆಗೆಯಲು ಶಸ್ತ್ರಚಿಕಿತ್ಸೆಗಾಗಿ ಆಕೆಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರು ಬೆರಳಿನ ಬದಲಾಗಿ ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯ ಬಾಯಿಯಲ್ಲಿ ಹತ್ತಿ ತುಂಬಿರುವುದನ್ನು ಕಂಡು ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.