ಶಿವಣ್ಣನ ಮನೆ ಮುಂದೆ ಕ್ಷಮೆ ಕೋರಿ ಕಾಯುತ್ತಿದ್ದ ಮಡೆನೂರು ಮನು-ಶಿವಣ್ಣ ಕ್ಷಮಿಸಿದ್ರಾ?

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಇತ್ತೀಚೆಗೆ ಸಾಲು ಸಾಲು ವಿವಾದಗಳಲ್ಲಿ ಸಿಕ್ಕಿಕೊಂಡಿದ್ದರು. ಅತ್ಯಾಚಾರ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದರು. ಈ ವೇಳೆ ಸಂತ್ರಸ್ತೆಯಿಂದ ಒಂದು ಆಡಿಯೋ ಬಿಡುಗಡೆಯಾಗಿತ್ತು. ಈ ಆಡಿಯೋದಲ್ಲಿ ಮಡೆನೂರು ಮನು ಕನ್ನಡ ಮೂರು ನಟರ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ್ದರು.
ಆ ಆಡಿಯೋದಲ್ಲಿ ಶಿವಣ್ಣನ ಬಗ್ಗೆನೂ ಮತಾಡಿದ್ದರು. ಇದು ಸೆಂಚುರಿ ಸ್ಟಾರ್ ಅಭಿಮಾನಿಗಳನ್ನು ಕೆರಳಿಸಿತ್ತು.
ಮಡೆನೂರು ಮನು ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಆಡಿಯೋ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಅವರಿಗೆ ಕ್ಷಮೆಯನ್ನು ಕೇಳಿದ್ದರು. ಆದರೂ, ಅಭಿಮಾನಿಗಳ ಸಿಟ್ಟೇನು ಕಮ್ಮಿಯಾಗಿರಲಿಲ್ಲ. ಹೀಗಾಗಿ ಡಾ.ರಾಜ್ ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷರಾದ ಎನ್ ಆರ್ ರಮೇಶ್ ಅವರ ಬಳಿಕ ಹೋಗಿ ಕ್ಷಮೆಯಾಚಿಸಿದ್ದರು.
ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ನಾಗಾವರದ ಮಾನ್ಯತಾ ಟೆಕ್ ಪಾರ್ಟ್ನಲ್ಲಿ ಇರುವ ಶಿವರಾಜ್ಕುಮಾರ್ ಮನೆಯ ಮುಂದೆ ಮಡೆನೂರು ಮನು ಕಾಯುತ್ತಿರುವ ವಿಡಿಯೋ ಹರಿದಾಡುತ್ತಿದೆ. ಇದರೊಂದಿಗೆ ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಅವರಿಗೆ ಕ್ಷಮೆ ಕೋರಿ ಬರೆದಿರುವ ಪತ್ರ ಕೂಡ ವೈರಲ್ ಆಗುತ್ತಿದೆ. ಅದೇನು ಅಂತ ನೋಡುವುದಾರೇ..
ಮಡೆನೂರು ಮನು ಡಾ.ರಾಜ್ ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎನ್ಆರ್ ರಮೇಶ್ ಬಳಿ ಕ್ಷಮೆ ಕೇಳಿದ ಬಳಿಕ ಶಿವಣ್ಣ ಮನೆ ಮುಂದೆ ಕಾಣಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ ಶಿವಣ್ಣನ ಮನೆಯ ಮುಂದೆ ಬಂದು ಕಾಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಶಿವಣ್ಣನನ್ನು ಭೇಟಿ ಮಾಡಿದ್ದಾರಾ? ಇಲ್ಲವಾ? ಅನ್ನೋದು ಇನ್ನೂ ರಿವೀಲ್ ಆಗಿಲ್ಲ.
ಚೊಚ್ಚಲ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೋ’ ಬಿಡುಗಡೆಗೂ ಮುನ್ನವೇ ಮಡೆನೂರು ಮನು ಜೈಲು ಸೇರಿದ್ದರು. ಆ ವೇಳೆ ಹೊರಬಿದ್ದಿದ್ದ ಆಡಿಯೋದಲ್ಲಿ “ಶಿವಣ್ಣ ಇನ್ನೊಂದು ಐದಾರು ವರ್ಷ ಸಾಯುತ್ತಾರೆ” ಎನ್ನುವ ಅರ್ಥದಲ್ಲಿ ಮಾತಾಡಿದ್ದರು. ಈ ಆಕ್ಷೇಪಾರ್ಹ ಮಾತುಗಳಿಗೆ ಎಲ್ಲಾ ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಶಿವಣ್ಣನ ಅಭಿಮಾನಿಗಳಂತೂ ಕಿಡಿ ಕಾರಿದ್ದರು. ಹೀಗಾಗಿ ಶಿವಣ್ಣನ ಮನೆ ಮುಂದೆ ಕ್ಷಮೆ ಕೇಳುವುದಕ್ಕೆ ಬಂದಿದ್ದರು ಎನ್ನಲಾಗಿದೆ. ಅಲ್ಲದೇ ಶಿವಣ್ಣ ಹಾಗೂ ಗೀತಕ್ಕ ಇಬ್ಬರಿಗೂ ಕ್ಷಮೆ ಕೋರಿ ಪತ್ರವನ್ನು ನೀಡಿದ್ದಾರೆ.

ಈ ಪತ್ರದಲ್ಲಿ ಮಡೆನೂರು ಮನು ತಮ್ಮ ಬಗ್ಗೆ ಪಿತೂರಿ ಮಾಡಿ ಈ ಸಂಚಿನಲ್ಲಿ ಸಿಲುಕಿಸಿದ್ದಾರೆ. ಮೂರು ಕೋಟಿ ಸಿನಿಮಾವನ್ನು ಹಾಳು ಮಾಡಿದ್ದಾರೆ. ಸಿನಿಮ ಬಿಡುಗಡೆಗೆ ಕೆಲವು ದಿನಗಳು ಇದೆ ಎನ್ನುವಾಗ ಆ ಹುಡುಗಿ ಒಂದಾಗೋಣ ಬಾ ಎಂದು ಕರೆಸಿದ್ದರು. ಬಳಿಕ ಯೂಟ್ಯೂಬರ್ ಒಬ್ಬರು ದೆಹಲಿಯಿಂದ ಎಣ್ಣೆಯನ್ನು ತಂದಿದ್ದಾರೆ. ಅದನ್ನು ಕುಡಿಯುವಂತೆ ಹೇಳಿದ್ದರು. ಡಯೆಟ್ನಲ್ಲಿ ಇದ್ದಿದ್ದರಿಂದ ಕುಡಿಯುವುದಿಲ್ಲ ಎಂದು ಹೇಳಿದೆ. ಆದರೂ ಖುಷಿ ವಿಷಯ ಹೇಳಿದ್ದೀಯಾ ಕುಡಿ ಎಂದು ಕುಡಿಸಿದರು. ಅಲ್ಲಿಂದ ನನಗೆ ಬೆಳಗ್ಗೆ ಆಗುವವರೆಗೂ ಎಚ್ಚರವಿಲ್ಲ. ಅಲ್ಲಿ ಏನಾಯ್ತು ಎಂಬುವುದು ಗೊತ್ತಿಲ್ಲ ಎಂದು ಮಡೆನೂರು ಪತ್ರದಲ್ಲಿ ವಿವರಿಸಿದ್ದಾರೆ.
ಇತ್ತೀಚೆಗೆ ಶಿವಣ್ಣ ಇವೆಂಟ್ ಒಂದಕ್ಕೆ ಯುಎಸ್ಎಗೆ ತೆರಳಿದ್ದರು. ಅಲ್ಲಿ ಮಡೆನೂರು ಮನು ಆಡಿಯೋಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು. “ನಾನು ಒಬ್ಬ ಮನುಷ್ಯ ಸಾವಿರ ವರ್ಷ, ನೂರು ವರ್ಷ ಬದುಕುವುದಕ್ಕೆ ಆಗುವುದಿಲ್ಲ. ಎಷ್ಟು ವರ್ಷ ಇರುತ್ತೇನೋ ನಮ್ಮ ನಡುವೆ ಅಷ್ಟೇ ಸಂಬಂಧ. ಒಂದು ದಿನ ಅಳುತ್ತೇವೆ. ಸ್ವಲ್ಪ ದಿನ ನೆನಪಿಸಿಕೊಳ್ಳುತ್ತೇವೆ. ಒಬ್ಬರು ಹೋದ್ಮೇಲೆ ಅವರ ನೆನಪುಗಳನ್ನು ತೆಗೆದುಕೊಂಡು ಹೋಗಬೇಕು ಅಷ್ಟೇ. ನಾವು ಏನು ಬಿಟ್ಟು ಹೋಗುತ್ತೇವೋ ಅದನ್ನು ಕಾಪಾಡಿಕೊಳ್ಳಬೇಕು. ಯಾರೋ ಏನೋ ಹೇಳುತ್ತಾರೆಂದು ನಾನು ಸಿಕ್ಕಿಕೊಳ್ಳುವುದಕ್ಕೆ ಆಗುವುದಿಲ್ಲ.” ಎಂದು ಶಿವಣ್ಣ ಪರೋಕ್ಷ ಪ್ರತಿಕ್ರಿಯಿಸಿದ್ದರು.