ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಜೈಲಿನಲ್ಲಿ ಐಷಾರಾಮಿ ಬದುಕು? ಗಂಭೀರ ಆರೋಪ ಬೆಳಕಿಗೆ

ಹಾವೇರಿ: ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಹಾವೇರಿ ಸಬ್ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಸಬ್ ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳದ್ದೇ ದರ್ಬಾರ್ ಆಗಿದೆ. ಅನ್ಯ ಖೈದಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಪಿಯೊಬ್ಬರಿಂದ ಮಾಹಿತಿ ದೊರೆತಿದೆ. ಸಾಮೂಹಿಕ ಅತ್ಯಾಚಾರದ 7 ಜನ ಆರೋಪಿಗಳಿಗೆ ಜೈಲು ಎಂಬುದು ಸ್ವರ್ಗದಂತಿದೆ. ಜೈಲಿನೊಳಗೆ ಯಾರೇ ಬಂದರೂ ಯಾವ ಕೇಸ್ ಎಂಬುದನ್ನು ಅವರಿಗೆ ತಿಳಿಸಬೇಕು, ಇಲ್ಲದಿದ್ದರೆ ಹಲ್ಲೆ ಮಾಡುತ್ತಾರೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಆರೋಪಿಯೊಬ್ಬರು ತಿಳಿಸಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ವಾರದಲ್ಲಿ ಮೂರು ಸಲ ಬಿರಿಯಾನಿ ಸೇರಿದಂತೆ ಬೇಕಿದ್ದೆಲ್ಲವೂ ಜೈಲಲ್ಲಿ ಸಿಗುತ್ತದೆ. ಅವರು ಹೇಳಿದ ಕೆಲಸವನ್ನು ಜೈಲಿನಲ್ಲಿರುವ ಇತರ ಆರೋಪಿಗಳು ಮಾಡಬೇಕಿದೆ. ಗ್ಯಾಂಗ್ ರೇಪ್ ಆರೋಪಿಗಳಿಗೆ ಗುಟ್ಕಾ ಸೇರಿದಂತೆ ಎಲ್ಲವನ್ನೂ ಪೂರೈಸಲಾಗುತ್ತಿದೆ. ಅವರು ಜೈಲು ಸಿಬ್ಬಂದಿಗಳಿಗೆ ಏಕವಚನದಲ್ಲೇ ಬೈಯುತ್ತಾರೆ. ಆದರೆ ಸಿಬ್ಬಂದಿ ಏನೂ ಮಾಡುವುದಿಲ್ಲ. ಉರ್ದುವಿನಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೆಲವು ಖೈದಿಗಳ ಎದೆಗೂಡಿನ ಮೂಳೆಗಳಿಗೆ ನೋವಾಗುವ ಹಾಗೆ ಗುದ್ದುತ್ತಾರೆ. ಜೈಲರ್ ಸೇರಿದಂತೆ ಯಾರೂ ಏನೂ ಮಾಡುವುದಿಲ್ಲ, ಸುಮ್ಮನಿರುತ್ತಾರೆ ಎಂದು ಬಿಡುಗಡೆಯಾಗಿ ಬಂದಿರುವ ಆರೋಪಿ ದೂರಿದ್ದಾರೆ.
ಹಾನಗಲ್ ಪ್ರಕರಣದ ಹಿನ್ನೆಲೆ
2024ರ ಜನವರಿಯಲ್ಲಿ ಹಾನಗಲ್ನಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣ ವರದಿಯಾಗಿತ್ತು. ಆರಂಭದಲ್ಲಿ ನೈತಿಕ ಪೊಲೀಸ್ಗಿರಿ ಎಂದು ವರದಿಯಾಗಿದ್ದರೂ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವ ವಿಚಾರ ಬಹಿರಂಗವಾಗಿತ್ತು. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿ ಆರೋಪ ಮಾಡಿದ್ದರು. ಅದಾದ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು.
ನಂತರ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದಲ್ಲದೆ, ರಾಜಕೀಯವಾಗಿಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಳ್ಳಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ಘಟನೆ ಸಂಬಂಧ ಅಫ್ತಾಬ್, ಮಾದರಸಾಬ್, ಅಬ್ದುಲ್ ಖಾದರ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಗೆ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ಆರೋಪಿಗಳು ಹಾವೇರಿ ಸಬ್ ಜೈಲಿನಲ್ಲಿದ್ದಾರೆ.