ಲಕ್ನೋ: ಯುಪಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಅಪಾಯದಿಂದ ಪಾರು

ಲಖನೌ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಇಂದು (ಮಾ.7) ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಲಖನೌನಿಂದ ಕೌಶಂಬಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೌಸಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಲಖನೌನ ಲಾ ಮಾರ್ಟಿನಿಯರ್ ಕಾಲೇಜು ಮೈದಾನದಿಂದ ಕೌಶಂಬಿಯಲ್ಲಿ ನಡೆಯಬೇಕಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಹೊರಟಿದ್ದರು. ಹೆಲಿಕಾಪ್ಟರ್ ಗಾಳಿಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಕೆಬಿನ್ನೊಳಗೆ ದಟ್ಟವಾದ ಹೊಗೆ ಆವರಿಸಿತು. ಅಷ್ಟೇ ಅಲ್ಲದೆ, ಕಾಕ್ಪಿಟ್ನಲ್ಲಿದ್ದ ಡಿಜಿಟಲ್ ಡಿಸ್ಪ್ಲೇ ಸಿಸ್ಟಮ್ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್ ತಕ್ಷಣವೇ ಲಖನೌ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ಸಂಪರ್ಕಿಸಿ ತುರ್ತು ಪರಿಸ್ಥಿತಿಯ ಮಾಹಿತಿ ನೀಡಿದರು. ಎಟಿಸಿಯಿಂದ ತಕ್ಷಣದ ಅನುಮತಿ ಪಡೆದ ಪೈಲಟ್, ಹೆಲಿಕಾಪ್ಟರ್ ಅನ್ನು ಲಖನೌನ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಅಮೌಸಿ) ತಿರುಗಿಸಿ ಸುರಕ್ಷಿತವಾಗಿ ಇಳಿಸಿದರು.ಹೆಲಿಕಾಪ್ಟರ್ನಲ್ಲಿ ಡಿಸಿಎಂ ಜೊತೆಗೆ ಅವರ ಆಪ್ತ ಸಹಾಯಕ ವಿವೇಕ್ ಮತ್ತು ಇಬ್ಬರು ಪೈಲಟ್ಗಳಿದ್ದರು. ಲ್ಯಾಂಡಿಂಗ್ ಆದ ತಕ್ಷಣ ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಯಿತು. ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
