ಪ್ರೇಮ ಸೋತಾಗ… ಜೀವವನ್ನೇ ಕೊಟ್ಟ! ಕರೀಂನಗರದಲ್ಲಿ ಯುವಕನ ಭಾರೀ ನಿರ್ಧಾರ

ತೆಲಂಗಾಣ :ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮ ಸಂಬಂಧಗಳು ಕೇವಲ ತೋರ್ಪಡಿಕೆ, ಶೋಕಿ, ಸಮಯ ವ್ಯರ್ಥಕ್ಕೆ ಮಾತ್ರ ಸೀಮಿತವಾದಂತೆ ಕಾಣಿಸುತ್ತಿದೆ. ಇಂದಿನ ಯುವಜನತೆ ಪ್ರೀತಿಸುವುದೇ ಯಾರನ್ನೋ, ಮದುವೆ ಆಗೋದು ಇನ್ಯಾರನ್ನೋ ಎಂಬ ಸಂಗತಿ ತೀರ ಸಾಮಾನ್ಯವಾಗಿಬಿಟ್ಟಿದೆ.
ಇಂತಹ ಘಟನೆಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. ತಮ್ಮವರಿಂದ ಮೋಸ ಹೋದೆವು ಎಂದು ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದರೂ ನನಗೂ ಜೀವನವಿದೆ ಎಂಬ ನಂಬಿಕೆಯಿಂದ ಬಹುತೇಕರು ಮುಂದೆ ಸಾಗುತ್ತಾರೆ. ಆದ್ರೆ, ಕೆಲವೇ ಕೆಲವರು ಮಾತ್ರ ಮನನೊಂದು ತಮ್ಮ ಜೀವನ ಇಲ್ಲಿಗೆ ಮುಗಿಯಿತು ಎಂದು ಆತ್ಮಹತ್ಯೆಗೆ ಶರಣಾಗಿ ಹೆತ್ತವರನ್ನು ಅನಾಥರನ್ನಾಗಿ ಮಾಡುತ್ತಾರೆ. ಈ ಯುವಕ ಕೂಡ ಅದೇ ಸಾಲಿಗೆ ಸೇರಿದ್ದಾನೆ.
7 ವರ್ಷಗಳಿಂದ ಪ್ರೀತಿಸಿದ್ದ ಯುವತಿ, ಮತ್ತೊಬ್ಬನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಷಯವನ್ನು ಅರಗಿಸಿಕೊಳ್ಳಲಾಗದ ಯುವಕ, ವಿಡಿಯೋ ಮಾಡಿ, ತನ್ನ ಸಾವಿಗೆ ಯಾರೆಲ್ಲ ಕಾರಣ ಎಂಬುದನ್ನು ವಿವರಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಕರೀಂನಗರದಲ್ಲಿ ವರದಿಯಾಗಿದೆ. ವಿವರವಾಗಿ ಹೇಳುವುದಾದರೆ, ಕರೀಂನಗರದ ಇಲ್ಲಂದಕುಂಟ ಮಂಡಲದ ಲಕ್ಷ್ಮಣಪಲ್ಲಿ ಗ್ರಾಮದ ದಾರಾ ಎಲ್ಲೇಶ್ ಮೃತಪಟ್ಟ ಯುವಕ.
ಎಲ್ಲೇಶ್ ತನ್ನದೇ ಗ್ರಾಮದ ವರಲಕ್ಷ್ಮಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಬೇರೊಬ್ಬನಿಗೆ ಕೊರಳೊಡ್ಡಿದ ಆಕೆ, ಆತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ತಾನು ಪ್ರೀತಿಸುತ್ತಿದ್ದ ಯುವತಿ ಯಾವುದೋ ಹುಡುಗನ ಜೊತೆ ಮದುವೆಯಾದಳು ಎಂಬ ಸುದ್ದಿ ತಿಳಿದು ಆಘಾತಕ್ಕೊಳಗಾದ ಎಲ್ಲೇಶ್, ಸೆಲ್ಫಿ ವಿಡಿಯೋದಲ್ಲಿ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂಬುದನ್ನು ವಿವರಿಸಿ, ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ವಿಡಿಯೋದಲ್ಲಿ, ಯುವತಿಗೆ ಸಂಬಂಧಿಸಿದ ಎಲ್ಲಾ ಫೋನ್ ರೆಕಾರ್ಡಿಂಗ್ಗಳು ತನ್ನ ಬಳಿ ಇವೆ. ಯುವತಿ ಬರುವವರೆಗೆ ನನ್ನ ಶವವನ್ನು ತೆಗೆಯಬೇಡಿ. ತನಗೆ ದೊಡ್ಡ ದ್ರೋಹ ಬಗೆದ ಯುವತಿಯ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲೇಶ್ ಮನವಿ ಮಾಡಿರುವುದಾಗಿ ವರದಿಯಾಗಿದೆ,