ಪ್ರೀತಿ ವೈಫಲ್ಯ: ಮನನೊಂದು ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಹುಣಸೂರು: ಪದವಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪ್ರೇಮ ವೈಫಲ್ಯದಿಂದ ಮನನೊಂದು ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತೂಗುಸೇತುವೆ ಬಳಿ ಗುರುವಾರ ನಡೆದಿದೆ.

ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿ ಪುತ್ರಿ ದೀಪಿಕಾ.ಎಚ್.ಎನ್ (19) ವರ್ಷ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಾಕೆ.
ಈಕೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದಳು. ಮೈಸೂರಿನ ಪಿ.ಜಿ. ಯಿಂದ ಕಾಲೇಜಿಗೆ ಹೋಗುವ ಬದಲು ಹುಣಸೂರಿಗೆ ಬಂದು ತೂಗು ಸೇತುವೆ ಮೇಲೆ ಬ್ಯಾಗ್ ಇಟ್ಟು ನದಿಗೆ ಹಾರಿದ್ದಾಳೆ.
ಘಟನೆ ವಿವರ:
ತಾಲೂಕಿನ ಕುಪ್ಪೆಕೊಳ್ಳಗಟ್ಟ ಗ್ರಾಮದ ಶರತ್ ಎಂಬಾತನನ್ನು ಮೃತ ದೀಪಿಕಾ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಶರತ್ ಹಾಗೂ ದೀಪಿಕಾ ಮೊಬೈಲ್ಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ಲವ್ ಬ್ರೇಕಪ್ಗೆ ಮನನೊಂದು ನಗರದ ತೂಗು ಸೇತುವೆ ಬಳಿ ತೆರಳಿ ಸೇತವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ನೋಟ್ :
ನದಿಗೆ ಹಾರಿ ಆತ್ಮಹತ್ಯೆಗೂ ಮುನ್ನ ಮೃತ ದೀಪಿಕಾ ತನ್ನ ಸಾವಿಗೆ ನಾನೇ ಕಾರಣ, ತನ್ನ ತಂದೆ-ತಾಯಿಯ ಮನಸ್ಸು ನೋಯಿಸಿರುವ ಕಾರಣ ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ತಂದೆ ನಂಜುಂಡಸ್ವಾಮಿ ಪ್ರಕರಣ ದಾಖಲಿಸಿದ್ದಾರೆ.