‘ಲವ್ ಬೈಟ್’ ಸಿದ್ಧಾಂತ: ಕೋಲ್ಕತ್ತಾ ಅತ್ಯಾಚಾರ ಪ್ರಕರಣದಲ್ಲಿ ವಕೀಲರ ವಿವಾದಾತ್ಮಕ ವಾದ!

ಕೋಲ್ಕತ್ತಾ: ಕೋಲ್ಕತ್ತಾ ಕಾನೂನು ಕಾಲೇಜಿ(Law College)ನ ಆವರಣದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ವಕೀಲರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಅತ್ಯಾಚಾರವೇ ಆಗಿದ್ದರೆ ಆರೋಪಿಯ ಕುತ್ತಿಗೆಯಲ್ಲಿ ಲವ್ ಬೈಟ್ ಯಾಕೆ ಇರ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಕಾನೂನು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಮನೋಜಿತ್ ಮಿಶ್ರಾ ಸೇರಿ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬಳಿಕ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು.
ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದ ಬಳಿಕ ಮೂವರು ಆಕೆಯನ್ನು ಎಳೆದುಕೊಂಡು ಹೋಗಿರುವುದು ಸತ್ಯ ಎಂದು ಪೊಲೀಸರು ತಿಳಿಸಿದ್ದು, ಮನೋಜಿತ್ ಮಿಶ್ರಾನನ್ನು ಬಂಧಿಸಿದ್ದರು. ಇದೀಗ ಮನೋಜಿತ್ ಪರ ವಕೀಲ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಒಂದೊಮ್ಮೆ ಅದು ಅತ್ಯಾಚಾರವೇ ಆಗಿದ್ದರೆ, ಮನೋಜಿತ್ ಕುತ್ತಿಗೆಯಲ್ಲಿ ಲವ್ ಬೈಟ್ ಯಾಕೆ ಇರುತ್ತಿತ್ತು ಎಂದು ಕೇಳಿದ್ದು ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ಮನೋಜಿತ್ ಪರ ವಕೀಲ ರಾಜು ಗಂಗೋಲಿ, ಮನೋಜಿತ್ ಮಿಶ್ರಾ ಅವರ ದೇಹದ ಮೇಲೂ ಲವ್ ಬೈಟ್ಸ್ಗಳು ಗುರುತುಗಳು ಕಂಡುಬಂದಿವೆ, ಅತ್ಯಾಚಾರ ನಡೆದಿದ್ದರೆ, ಆರೋಪಿಯ ದೇಹದ ಮೇಲೆ ಎಂದಿಗೂ ಈ ರೀತಿಯ ಗುರುತುಗಳು ಇರುತ್ತಿರಲಿಲ್ಲ ಎಂದು ವಾದಿಸಿದ್ದಾರೆ. ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆಯೇ ಮತ್ತು ಆಕೆಯ ಕರೆ ದಾಖಲೆಗಳ ಬಗ್ಗೆ ಪರಿಶೀಲಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದರು.

ಪ್ರಮುಖ ಆರೋಪಿಗಳಾದ ಮಾಜಿ ವಿದ್ಯಾರ್ಥಿ ಮನೋಜಿತ್ ಮಿಶ್ರಾ ಮತ್ತು ಪ್ರಸ್ತುತ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಜೈಬ್ ಅಹ್ಮದ್ ಮತ್ತು ಪ್ರಮಿತ್ ಮುಖರ್ಜಿ ಅವರನ್ನು ಬಂಧಿಸಲಾಗಿತ್ತು. ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಭದ್ರತಾ ಸಿಬ್ಬಂದಿ ಪಿನಾಕಿ ಬಂಡೋಪಾಧ್ಯಾಯ ಅವರನ್ನು ಸಹ ಬಂಧಿಸಲಾಗಿತ್ತು.
ಕಸ್ಬಾ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೋಲ್ಕತ್ತಾ ಕಾನೂನು ಕಾಲೇಜಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ.
ಪರವಾನಗಿ ರದ್ದು
ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ ಬುಧವಾರ ಮನೋಜಿತ್ ಮಿಶ್ರಾ ಅವರ ಪರವಾನಗಿಯನ್ನು ರದ್ದುಗೊಳಿಸಿ, ಅವರು ವಕೀಲರಾಗಿ ಅಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಘಟನೆಯ ಕುರಿತು ಔಪಚಾರಿಕ ದೂರು ಸ್ವೀಕರಿಸಿದ ಏಳು ದಿನಗಳ ನಂತರ ಬಾರ್ ಕೌನ್ಸಿಲ್ ಕ್ರಮ ಕೈಗೊಂಡಿತು.
ಜುಲೈ 2 ರಂದು ನಡೆದ ಬಂಗಾಳ ಬಾರ್ ಕೌನ್ಸಿಲ್ ಸಭೆಯ ನಂತರ, ಮಿಶ್ರಾ ಅವರ ಹೆಸರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗುವುದು ಮತ್ತು ನಿರ್ಧಾರವನ್ನು ಕೇಂದ್ರ ಬಾರ್ ಕೌನ್ಸಿಲ್ಗೆ ತಿಳಿಸಲಾಗುವುದು ಎಂದು ನಿರ್ಧರಿಸಲಾಯಿತು.
ಮಿಶ್ರಾ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ತಿನಲ್ಲಿ (TMCP) ಪ್ರಮುಖ ಹುದ್ದೆಯನ್ನು ಹೊಂದಿದ್ದರು ಮತ್ತು ಅಲಿಪುರ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು.