ಲೋಕಸಭೆ: ರಾಹುಲ್ಗೆ ಅಮಿತ್ ಶಾ ಕೌಂಟರ್; ‘ದುರ್ಬಲ ನಾಯಕತ್ವದಿಂದ ಕಾಂಗ್ರೆಸ್ ಸೋಲು’

ನವದೆಹಲಿ: ಮತಪಟ್ಟಿ ಪರಿಷ್ಕರಣೆ ಬಗ್ಗೆ ಲೋಕಸಭೆಯಲ್ಲಿ ಇಂದು ಗೃಹ ಸಚಿವ ಅಮಿತ್ ಶಾ (Amit Shah) ರೋಷಾವೇಶದಲ್ಲಿ ಅಬ್ಬರಿಸಿದರು. ಚುನಾವಣಾ ಆಯೋಗದ (Election Commission) ಜೊತೆ ಸೇರಿ ಬಿಜೆಪಿ ಮತ ಕಳವು ಮಾಡ್ತಿದೆ ಅಂದಿದ್ದ ರಾಹುಲ್ ಗಾಂಧಿ ಟೀಕೆಗೆ ಅಮಿತ್ ಶಾ ಕೌಂಟರ್ ಕೊಟ್ಟರು.

ದುರ್ಬಲ ನಾಯಕತ್ವದಿಂದ ಸೋಲು
ಮತ ಕಳವು ಪ್ರಕರಣದಲ್ಲಿ ಎ1 ನೆಹರು, ಎ2 ಇಂದಿರಾ ಹಾಗೂ ಎ3 ಸೋನಿಯಾ ಗಾಂಧಿ ಅಂತ ಗುಡುಗಿದರು. ಕಾಂಗ್ರೆಸಿಗರು ಸೋತಾಗಷ್ಟೇ ಮತಪಟ್ಟಿ-ಇವಿಎಂಗಳಲ್ಲಿ ದೋಷವೇ? ಇವಿಎಂ-ವಿವಿಪ್ಯಾಟ್ಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ದುರ್ಬಲ ನಾಯಕತ್ವದಿಂದ ಕಾಂಗ್ರೆಸ್ ಸೋಲುತಿದೆ ಅಂತ ಪಂಚ್ ಕೊಟ್ಟರು.

ವಿಪಕ್ಷಗಳು ಎಸ್ಐಆರ್ ಬಗ್ಗೆ ದಾರಿ ತಪ್ಪಿಸ್ತಿವೆ. ವಾಸ್ತವ ಅಂಶಗಳನ್ನು ತಿರುಚುತಿವೆ. ರಾಹುಲ್ ಗಾಂಧಿಯ (Rahul Gandhi) ಮಾತು ಸಂಪೂರ್ಣ ಗೊಂದಲವಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆಯೇ ಇಲ್ಲದ ಮೇಲೆ ಏಕೆ ಸ್ಪರ್ಧಿಸ್ತೀರಿ? ರಾಯ್ಬರೇಲಿಯಲ್ಲಿ ಇಂದಿರಾ ಗಾಂಧಿ ನ್ಯಾಯಸಮ್ಮತವಲ್ಲದ ಚುನಾವಣೆಯಲ್ಲಿ ಗೆದ್ದಿದ್ದರು. ಮತಕಳವಿಗೆ ತೆರೆಬಿದ್ದಿದ್ದಕ್ಕೆ ವಿಪಕ್ಷಗಳು ನಿರಾಸೆಗೊಂಡಿವೆ ಎಂದು ತಿವಿದರು.
ಹರಿಯಾಣದ ಒಂದೇ ಮನೆಯಲ್ಲಿ ಜಾಸ್ತಿಸಂಖ್ಯೆಯಲ್ಲಿ ವೋಟರ್ಸ್ ಇದ್ದಾರೆ ಅನ್ನೋ ರಾಹುಲ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ಕೊಟ್ಟರು. ಈ ವೇಳೆ, ಆಕ್ಷೇಪಿಸಿದ ರಾಹುಲ್ ಗಾಂಧಿ, ನಾನು ನಡೆಸಿರುವ 3 ಸುದ್ದಿಗೋಷ್ಠಿಗಳ ಡೇಟಾ ಬಗ್ಗೆ ಓಪನ್ ಡಿಬೇಟ್ ಮಾಡೋಣ ಅಂತ ಚಾಲೆಂಜ್ ಮಾಡಿದ್ರು. ಇದಕ್ಕೆ ನಿಮ್ಮ ಇಷ್ಟದಂತೆ ಸಂಸತ್ತು ನಡೆಯಲ್ಲ ಅಂತ ಅಮಿತ್ ಶಾ ಕೌಂಟರ್ ಕೊಟ್ಟರು.

ಮುಂದುವರಿದು… ಬಿಜೆಪಿ ಮತ್ತು ಎನ್ಡಿಎ ಚರ್ಚೆಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನ್ಯಾಯಯುತ ಚುನಾವಣೆಗಳನ್ನ ನಡೆಸುವ ಜವಾಬ್ದಾರಿಯನ್ನ ಚುನಾವಣಾ ಆಯೋಗ ಹೊಂದಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗವೂ ಹೊಂದಿದೆ ಎಂದು ಅಮಿತ್ ಶಾ ಹೇಳಿದರು
325ನೇ ವಿಧಿಯು ಯಾವುದೇ ಅರ್ಹ ಮತದಾರರನ್ನ ಪಟ್ಟಿಯಿಂದ ಹೊರಗಿಡುವುದನ್ನ ನಿಷೇಧಿಸುತ್ತದೆ. ಮತದಾರರ ಮಾನದಂಡಗಳು 326ನೇ ವಿಧಿಯಲ್ಲಿವೆ. ಮೊದಲ ಅವಶ್ಯಕತೆಯೆಂದರೆ ಮತದಾರನು ಭಾರತೀಯ ಪ್ರಜೆಯಾಗಿರಬೇಕು. 2ನೇಯದು ಅವರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಚುನಾವಣಾ ಆಯೋಗವು ಈ ಎಲ್ಲಾ ಅರ್ಹತಾ ಮಾನದಂಡಗಳನ್ನ ಪರಿಶೀಲಿಸುವ ಮತ್ತು ಶಾಸನ ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ. ಸಂವಿಧಾನವು ಅವರಿಗೆ ಸಂಪೂರ್ಣ ಅಧಿಕಾರ ನೀಡಿರುವುದರಿಂದ ಚುನಾವಣೆ ಮಾಡುವ ಅಧಿಕಾರ ತಮಗೆ ಇಲ್ಲ ಎಂದು ಕುಟುಕಿದರು

ಈ ಮಧ್ಯೆ, ಕೇಂದ್ರ ಸಚಿವ, ಕೇರಳದ ಸುರೇಶ್ ಗೋಪಿಗೆ ಎರಡೆರಡು ಕಡೆ ಮತದಾನದ ಹಕ್ಕು ಇದೆ ಅಂತ ಸಿಪಿಐ ನಾಯಕ ವಿ.ಎಸ್ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಕೇರಳ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಡೆದ ಮೊದಲ ಹಂತದ ವೋಟಿಂಗ್ನಲ್ಲಿ ಸುರೇಶ್ ಗೋಪಿ ತಿರುವನಂತಪುರದಲ್ಲಿ ಮತ ಚಲಾಯಿಸಿದ್ರು. ಆದ್ರೆ 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ನಿಂದ ಮತದಾನ ಮಾಡಿದ್ದರು ಅಂದಿದ್ದಾರೆ.