ಶ್ರೀಕರಿ ಆಸ್ಪತ್ರೆಯಲ್ಲಿ ಅಸುರಕ್ಷಿತ ಸಿಜರಿಯನ್ ವೇಳೆ ಬಾಣಂತಿಯರ ಜೀವದಲ್ಲಿ ಆಟ

ವಿಜಯನಗರ:ಹೊಸಪೇಟೆಯ ಶ್ರೀಕರಿ ಖಾಸಗಿ ಆಸ್ಪತ್ರೆಗೆ ಬಳ್ಳಾರಿ ಸೇರಿದಂತೆ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ ಸಿಜರಿಯನ್ ಆದ ಜಾಗದಲ್ಲಿ ಕೀವು ಬರುತ್ತಿದೆ.
ಇದರಿಂದ ಹೊಟ್ಟೆಯ ಒಳ ಭಾಗದಲ್ಲಿ ಸಾಕಷ್ಟು ಇನ್ಫೆಕ್ಷನ್ ಆಗಿದೆ. ಜೊತೆಗೆ ಗರ್ಭಚೀಲವನ್ನೇ ತಗಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ವೈದ್ಯಯ ವಿರುದ್ಧ ಕ್ರಮ ಆಗಬೇಕು ಅಂತ ನೊಂದವರು ಆಗ್ರಹಿಸಿದ್ದಾರೆ.
ಸಂಡೂರಿನ ಸೃಜನ್ ಎಂಬುವರು ತಮ್ಮ ಪತ್ನಿಯನ್ನು ಕಳೆದ ವರ್ಷ ಶ್ರೀಕರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಿಸಿದ್ದರು. ಅವರ ಪತ್ನಿಗೆ ಆಸ್ಪತ್ರೆಯ ವ್ಯದ್ಯೆ ಡಾ.ಗಂಗೋತ್ರಿ ಸಿಜರಿಯನ್ ಮಾಡಿದ್ದರು. ನಾಲ್ಕು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಬಂದಿದ್ದರು. ಆದರೆ, ವಾರ ಕಳೆದಂತೆ ಅವರ ಪತ್ನಿಗೆ ಸಿಜರಿಯನ್ ಮಾಡಿದ ಸ್ಥಳದಲ್ಲಿ ಕೀವು ಬರಲು ಆರಂಭವಾಗಿದೆ. ತಕ್ಷಣ ಆಸ್ಪತ್ರೆಗೆ ಬಂದು ಆಗಿರುವ ವಿಚಾರವನ್ನು ತಿಳಿಸಿದ್ದಾರೆ. ಆದರೆ, ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ. ನೋವು ಉಲ್ಬಣವಾಗಿದೆ. ಹೀಗಾಗಿ, ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ಅಸುರಕ್ಷಿತ ಸಿಜರಿಯನ್ ಹೆರಿಗೆಯಾಗಿದೆ, ಓಟಿ ಹೈಜಿನಿಕ್ ಇಲ್ಲ, ಇದರಿಂದ ಇನ್ಫೆಕ್ಷನ್ ಆಗಿದ್ದು, ತಕ್ಷಣ ಚಿಕಿತ್ಸೆ ನೀಡಬೇಕು ಅಂತ ವೈದ್ಯರು ಹೇಳಿದ್ದಾರೆ.

ಈ ವೇಳೆ ಶ್ರೀಕರಿ ಆಸ್ಪತ್ರೆ ವೈದ್ಯರು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ. ಇವರ ಹಾಗೆ ಮೂರು ವರ್ಷದಲ್ಲಿ ಸುಮಾರು 13 ಬಾಣಂತಿಯರು ಇದೇ ತರಹದ ನರಕ ಅನುಭವಿಸಿದ್ದಾರೆ. ಹೀಗಾಗಿ, ಇಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಣಂತಿಯರು ಒತ್ತಾಯಿಸಿದ್ದಾರೆ.
ಶ್ರೀಕರಿ ಆಸ್ಪತ್ರೆ ವಿರುದ್ಧ ಜಿಲ್ಲಾ ವೈದ್ಯಾಧಿಕಾರಿ ಡಾ. ಶಂಕರ್ ನಾಯ್ಕ ಅವರಿಗೆ ನೊಂದವರು ದೂರು ನೀಡಿದ್ದು, ಈ ಬಗ್ಗೆ ನಾಲ್ಕು ವೈದ್ಯರ ತಂಡ ರಚಿಸಲಾಗುತ್ತದೆ. ವೈದ್ಯರ ತಂಡ ಶ್ರೀಕರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ವರದಿ ಬಂದ ಬಳಿಕ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂದು ಡಿಹೆಚ್ಓ ಡಾ. ಶಂಕರ್ ನಾಯ್ಕ ಹೇಳಿದ್ದಾರೆ.
ಈ ಬಗ್ಗೆ ಡಾ. ಗಂಗೋತ್ರಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನ ಮಾಡಿದರೇ, ಕೈಗೆ ಸಿಗದಂತೆ ನುಣಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕಿದೆ.