ಲಿಂಗರಾಜಪುರದಲ್ಲಿ ಕಲುಷಿತ ನೀರಿನ ಆತಂಕ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ; ಮಾಲಿನ್ಯ ಪತ್ತೆಗೆ ರೋಬೋಟಿಕ್ ತಂತ್ರಜ್ಞಾನದ ಮೊರೆ ಹೋದ ಬಿಡಬ್ಲ್ಯೂಎಸ್ಎಸ್ಬಿ!

ಬೆಂಗಳೂರು: ಬೆಂಗಳೂರಿನ ಲಿಂಗರಾಜಪುರದ ಕೆಎಸ್ಎಫ್ಸಿ ಲೇಔಟ್ನಲ್ಲಿ ಕುಡಿಯುವ ನೀರಿನ ಪೈಪ್ಲೈನ್ಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು, ಸುಮಾರು 40ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಭಾಗದ ನಿವಾಸಿಗಳು ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಜಠರ ಸಂಬಂಧಿತ ಸೋಂಕುಗಳಿಂದ ಬಳಲುತ್ತಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಆರಂಭದಲ್ಲಿ ಇದು ಸಾಮಾನ್ಯ ಜ್ವರ ಅಥವಾ ಫುಡ್ ಪಾಯ್ಸನಿಂಗ್ ಎಂದು ಭಾವಿಸಲಾಗಿತ್ತಾದರೂ, ನಲ್ಲಿಗಳಲ್ಲಿ ದುರ್ವಾಸನೆಯುಕ್ತ ನೊರೆಯುಳ್ಳ ನೀರು ಬರಲಾರಂಭಿಸಿದಾಗ ಮಾಲಿನ್ಯದ ಭೀಕರತೆ ಬೆಳಕಿಗೆ ಬಂದಿದೆ. ಸಂಪ್ಗಳಲ್ಲಿ ಕೊಳಚೆ ನೀರಿನ ಪದರ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ತಕ್ಷಣವೇ ಈ ಪ್ರದೇಶಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿದೆ.

ಮಾಲಿನ್ಯದ ನಿಖರ ಮೂಲವನ್ನು ಪತ್ತೆಹಚ್ಚಲು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಸುಧಾರಿತ ರೋಬೋಟಿಕ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಈಗಾಗಲೇ ಪೈಪ್ಲೈನ್ನಲ್ಲಿ ಒಳಚರಂಡಿ ನೀರು ಸೋರಿಕೆಯಾಗುತ್ತಿರುವುದು ದೃಢಪಟ್ಟಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂಜಿನಿಯರಿಂಗ್ ತಂಡಗಳು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿವೆ. ಪೈಪ್ಲೈನ್ ನೀರು ಪೂರೈಕೆ ಸಂಪೂರ್ಣವಾಗಿ ಪುನಃಸ್ಥಾಪನೆಯಾಗುವವರೆಗೆ ನಿವಾಸಿಗಳಿಗೆ ‘ಸಂಚಾರಿ ಕಾವೇರಿ’ ಟ್ಯಾಂಕರ್ಗಳ ಮೂಲಕ ಉಚಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಅಧಿಕಾರಿಗಳು ಇಂದು (ಜನವರಿ 5, ಸೋಮವಾರ) ಪೀಡಿತ ಪ್ರದೇಶದಲ್ಲಿ ಸಮಗ್ರ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ. ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮತ್ತು ಪರ್ಯಾಯ ನೀರಿನ ಮೂಲಗಳನ್ನು ಬಳಸುವಂತೆ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಲಾಗಿದೆ.
