ದೆಹಲಿ ಬಿಟ್ಟು ಹೋಗಿ: ಕಳಪೆ ವಾಯುಗುಣಮಟ್ಟಕ್ಕೆ ಕಳವಳ ವ್ಯಕ್ತಪಡಿಸಿದ ಏಮ್ಸ್ ಮಾಜಿ ನಿರ್ದೇಶಕ; ‘ಶ್ವಾಸಕೋಶ ಸಮಸ್ಯೆ ಇರುವವರಿಗೆ ವಿಷವಾಗುತ್ತಿದೆ ಗಾಳಿ’

ನವದೆಹಲಿ: ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಗುಣಮಟ್ಟವು (Delhi Air Quality) ಕಳಪೆ ಮಟ್ಟಕ್ಕೆ ಕುಸಿಯುತ್ತದೆ. ಆದ್ರೆ ಈ ಬಾರಿ ಉಸಿರಾಡುವ ಗಾಳಿ ವಿಷವಾಗುತ್ತಿದೆ. ಜನರ ಶ್ವಾಸಕೋಶ (lungs), ಹೃದಯ ಹಾಗೂ ಮಿದುಳಿಗೆ ನಿರಂತರ ಹಾನಿಯುಂಟು ಮಾಡುತ್ತಿದೆ. ಹೀಗಾಗಿ ಶ್ವಾಸಕೋಶ ಸಮಸ್ಯೆ ಇರೋರು ಈ ಕೂಡಲೇ ದೆಹಲಿ ಬಿಟ್ಟು ಹೋಗಿ ಎಂದು AIIMS ಮಾಜಿ ನಿರ್ದೇಶಕ ಮತ್ತು ಶ್ವಾಸಕೋಶ ಶಾಸ್ತ್ರಜ್ಞ ಡಾ. ರಂದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ದೆಹಲಿ ಗುಣಮಟ್ಟವು ಅತ್ಯಂತ ಅಪಾಯ ಮಟ್ಟಕ್ಕೆ ತಲುಪುತ್ತಿದೆ. ಶ್ವಾಸಕೋಶ ದುರ್ಬಲ (ವೀಕ್) ಇರೋರು ಸಾಧ್ಯವಾದ್ರೆ ಕೂಡಲೇ ನಗರವನ್ನು ಬಿಟ್ಟು ಹೋಗಿ. ಒಂದು ವೇಳೆ ಇದು ಸಾಧ್ಯವಾಗಗಿದ್ದರೇ ಮಾಸ್ಕ್ ಧರಿಸುವುದು, ಮನೆಯಲ್ಲಿದ್ದರೇ ಏರ್ ಫಿಲ್ಟರ್ ಬಳಸುವುದು ಅಥವಾ ವೈದ್ಯರು ನೀಡಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ದೆಹಲಿಯ ವಾಯು ಮಾಲಿನ್ಯವು ಸೈಲೆಂಟಾಗಿ ಜನರನ್ನ ಕೊಲ್ಲುತ್ತಿದೆ, ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಉಸಿರಾಟ ಸಮಸ್ಯೆ ಹೆಚ್ಚಾಗ್ತಿದೆ
ಮುಂದುವರಿದು ಮಾತನಾಡಿರುವ ರಂದೀಪ್ ಗುಲೇರಿಯಾ, ದೆಹಲಿಯ ಆಸ್ಪತ್ರೆಗಳಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು, ತೀವ್ರ ಕೆಮ್ಮು, ಆಸ್ತಮಾ, ಸಿಒಪಿಡಿ ನಂತಹ ದೀರ್ಘಕಾಲಿಕ ಶ್ವಾಸಕೋಶ ಸಮಸ್ಯೆಗಳಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಲ್ಲಿ ಆತಂಕಕಾರಿ ಬೆಳವಣಿಗೆ ಏನಂದ್ರೆ ಯುವಜನರು ಉಸಿರಾಟ, ಅತಿಯಾದ ಕೆಮ್ಮಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.