ದಕ್ಷಿಣ ಕನ್ನಡದಲ್ಲಿ ಸಂಘಪರಿವಾರದ ಮನೆಗಳಿಗೆ ತಡರಾತ್ರಿ ಪೊಲೀಸ್ ದಾಳಿ: ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹತ್ಯೆಗಳು ಸರ್ಕಾರವನ್ನು ಬಡಿದೆಬ್ಬಿಸಿದೆ. ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ತಡರಾತ್ರಿ ಆರ್ಎಸ್ಎಸ್ ಹಾಗೂ ಸಂಘ ಪರಿವಾರದ ನಾಯಕರ ಮನೆಗಳಿಗೆ ಪೊಲೀಸರು ಭೇಟಿ ನೀಡಿ, ಜಿಪಿಎಸ್ ಆಧಾರಿತ ಫೋಟೋ ಸಂಗ್ರಹಿಸಿ ತೆರಳುತ್ತಿದ್ದಾರೆ. ಪೊಲೀಸರ ಈ ನಡೆಗೆ ಆಕ್ರೋಶಗೊಂಡಿರುವ ಸಂಘ ಪರಿವಾರದ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಪೊಲೀಸರು ಸೋಮವಾರ ರಾತ್ರಿ ಆರ್ಎಸ್ಎಸ್ ಪ್ರಾಂತ ಪ್ರಮುಖ ನಾ. ಸೀತಾರಾಂ ಸುಳ್ಳ ಅವರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಓ ಲಕ್ಷಿ ಪ್ರಸಾದ್, ಉಪ್ಪಿನಂಗಡಿಯ ವಿದ್ಯಾವರ್ಧಕ ಸಂಘದ ಸಂಚಾಲಕಿ ಯು ಜಿ ರಾಧಾ, ಪುತ್ತೂರಿನ ವಿಹೆಚ್ಪಿ ಮಾಜಿ ಉಪಾಧ್ಯಕ್ಷರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.
ಪೊಲಿಸರ ಈ ನಡೆಯನ್ನು ಬಿಜೆಪಿ ಖಂಡಿಸಿದ್ದು, ಯಾವುದೇ ಕೇಸ್ಗಳು ಇಲ್ಲದೆ ಇದ್ದರೂ ತಡರಾತ್ರಿ ಮನೆಗೆ ತೆರಳಿ ವಿಚಾರಣೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಪೊಲೀಸರ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ತಿರ್ಮಾನಿಸಿದೆ.
ಪ್ರತಿಭಟನೆಯ ಎಚ್ಚರಿಕೆ ನೀಡಿದ ವಿಹೆಚ್ಪಿ
ಹಿಂದೂ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಲು ಮುಂದಾಗಿರುವ ಪೊಲೀಸ್ ಇಲಾಖೆಯ ತೀರ್ಮಾನವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ರಾಷ್ಟ್ರೀಯತೆ, ಧರ್ಮದ ಪರವಾಗಿ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಲಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರನ್ನೇ ಗುರಿಯಾಗಿಸಲಾಗಿದೆ. ಬಲಪಂಥೀಯ ಸಂಘಟನೆ ಸಕ್ರಿಯ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕರ್ತರ ಮನೆಗೆ ಪೊಲೀಸರು ತಡರಾತ್ರಿ ತೆರಳಿ ಕಿರುಕುಳ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸ್ ರಾಜ್ ವ್ಯವಸ್ಥೆಯ ಧಮನಕಾರಿ ನೀತಿಯ ಬಗ್ಗೆ ಉತ್ತರ ಭಾರತದ ಉದಾಹರಣೆ ನೀಡುತ್ತಿದ್ದೆವು. ಅಂತಹ ಧಮನಕಾರಿ ವ್ಯವಸ್ಥೆ ಈಗ ಕರಾವಳಿ ಭಾಗದಲ್ಲಿ ಶುರುವಾಗಿದೆ ಅಂತ ಅನಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ ಮುಖಂಡ ಸುನಿಲ್ ಕೆ.ಆರ್ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಈ ವ್ಯವಸ್ಥೆಯನ್ನ ಖಂಡಿಸುತ್ತೆ. ಇದು ಮುಂದುವರೆದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡ ಸುನಿಲ್ ಕೆಆರ್ ಎಚ್ಚರಿಕೆ ನೀಡಿದರು.
ಎಸ್ಪಿಯನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ
ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಮಂಗಳವಾರ (ಜೂ.03) ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿತು.
ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಸಂಪೂರ್ಣ ಸಹಕಾರ ನೀಡುತ್ತೇವೆ. ಎಲ್ಲ ರೀತಿಯ ತನಿಖೆಯಲ್ಲಿ, ಎಲ್ಲ ರೀತಿಯ ಕಾರ್ಯ ಚಟುವಟಿಕೆಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಇಲ್ಲದ ರೀತಿಯಲ್ಲಿ ನೀವು ಇಲಾಖೆಯನ್ನು ನಡೆಸಬೇಕೆಂಬ ನಮ್ಮ ಕೋರಿಕೆ ಅವರ ಮುಂದೆ ಇಟ್ಟಿದ್ದೇವೆ ಎಂದು ಹೇಳಿದರು.
ಈ ಹಿಂದೆ ಎಲ್ಲ ಪೊಲೀಸ್ ಠಾಣೆಗಳು, ಪೊಲೀಸ್ ಆಯುಕ್ತರ ಕಚೇರಿಗಳು, ಎಸ್ಪಿ ಕಚೇರಿ ಕಾಂಗ್ರೆಸ್ನ ಕಚೇರಿಯಂತೆ ನಾಯಕರುಗಳು ನಡೆಸುತ್ತಿದ್ದರು. ಅದಕ್ಕೆ ಆಸ್ಪದ ಕೊಡಬಾರದು. ನ್ಯಾಯಯುತವಾಗಿ ಏನು ಮಾಡಬೇಕು ಅದನ್ನ ಮಾಡಿ. ಗೋ ಹತ್ಯೆ, ಗೋ ಕಳ್ಳ ಸಾಗಾಣಿಕೆ, ಡ್ರಗ್ಸ್, ಲವ್ ಜಿಹಾದ್ಗಳಿಗೆ ಕಡಿವಾಣ ಹಾಕಿದರೆ ಮಾತ್ರ ಕಾನೂನು ಸುವ್ಯವಸ್ಥೆ ಕಂಟ್ರೋಲ್ಗೆ ತರಬಹುದು ಎಂದು ಅವರಿಗೆ ಹೇಳಿದ್ದೇವೆ ಎಂದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಕೇಸ್ ಹಾಕಿ ವಾಕ್ ಸ್ವಾತಂತ್ರ್ಯವನ್ನು ಕಸಿಯುವಂತಹ ಪ್ರಯತ್ನ ಸರ್ಕಾರ ಮಾಡಿದೆ. ನಾವು ಅದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಗಡಿಪಾರು ಮಾಡಿದ ಲಿಸ್ಟ್ನಲ್ಲಿ ನಟೋರಿಯಸ್ ಮುಸ್ಲಿಮರ ಹೆಸರಿಲ್ಲ. ಈ ಲಿಸ್ಟ್ ಅನ್ನು ಕಾಂಗ್ರೆಸ್ನ ನಾಯಕರೇ ಅಧಿಕಾರಿಗಳ ಜೊತೆ ಕೂತು ಮಾಡಿದ್ದಾರೆ. ಈ ಲಿಸ್ಟ್ ತಯಾರು ಮಾಡಲು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿರಬಹುದು ಎಂದು ವಾಗ್ದಾಳಿ ಮಾಡಿದರು.
ರಾಜಕೀಯ ಹಸ್ತಕ್ಷೇಪ ಮಾಡದೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೇ ಕಾನೂನು ಸುವ್ಯವಸ್ಥೆ ಆಗುತ್ತದೆ. ಯಾವುದೇ ಕೇಸ್ನಲ್ಲಿ ಇಲ್ಲದ, ಸಮಾಜ ಸೇವೆಯಲ್ಲಿ ತೊಡಗಿದ ಹಿರಿಯರ ಮನೆಗೆ ರಾತ್ರಿ ಹೋಗೋದು ಸರಿಯಲ್ಲ. ಈ ರೀತಿ ಮುಂದುವರಿದರೆ ನಾವು ಸುಮ್ಮನೆ ಕೂರುವ ಮಾತಿಲ್ಲ ಎಂದು ಎಚ್ಚರಿಕೆ ನೀಡಿದರು.