66 ಕೋಟಿ ಭಕ್ತರ ಆಗಮನ, ಉತ್ತರಪ್ರದೇಶದ ಆರ್ಥಿಕತೆಗೆ ಭರ್ಜರಿ ಉತ್ತೇಜನ!

ನವದೆಹಲಿ: 66 ಕೋಟಿ ಜನರ ಆಗಮನಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ ಪ್ರಯಾಗ್ರಾಜ್ನ ಕುಂಭಮೇಳ ಸ್ಥಳೀಯರು ಹಾಗೂ ಇಡೀ ರಾಜ್ಯದ ಆರ್ಥಿಕತೆಗೆ ಭರ್ಜರಿ ಕೊಡುಗೆ ನೀಡಿದೆ. ಅದರಲ್ಲೂ ತ್ರಿವೇಣಿ ಸಂಗಮ ಸ್ಥಳಕ್ಕೆ ಜನರನ್ನು ಕರೆದೊಯ್ಯುವ ಸೇವೆ ನೀಡುವ ನಾವಿಕನ ಕುಟುಂಬವೊಂದು ಕುಂಭಮೇಳದ ಅವಧಿಯಲ್ಲಿ ಭರ್ಜರಿ 30 ಕೋಟಿ ರು. ಸಂಪಾದಿಸಿದೆ.

ಈ ವಿಷಯವನ್ನು ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಂಚಿಕೊಂಡಿದ್ದಾರೆ. ಭಕ್ತರು ನದಿ ದಂಡೆಗಳಿಂದ ಸಂಗಮ ಸ್ಥಳಕ್ಕೆ ತೆರಳಲು ದೋಣಿ ಅವಲಂಬಿಸಿದ್ದರು. ಇದಕ್ಕಾಗಿ ಒಬ್ಬರಿಗೆ 500 ರು.-1000 ರು.ವರೆಗೂ ಶುಲ್ಕ ಪಡೆಯುತ್ತಿದ್ದರು. ಹೀಗಾಗಿ 130 ದೋಣಿಗಳನ್ನು ಹೊಂದಿದ್ದ ಆ ನಾವಿಕ ಪ್ರತಿ ದೋಣಿಯಿಂದ ಪ್ರತಿನಿತ್ಯ ಕನಿಷ್ಠ 50000 ರು.ನಂತೆ ಕುಂಭಮೇಳದ ಅವಧಿಯಲ್ಲಿ ಭರ್ಜರಿ ಸಂಪಾದನೆ ಮಾಡಿದ್ದಾನೆ.
ಜೊತೆಗೆ ‘ಕುಂಭಮೇಳಕ್ಕಾಗಿ ಮಾಡಿದ 7,500 ಕೋಟಿ ರು. ಹೂಡಿಕೆಯಿಂದ 3 ಲಕ್ಷ ಕೋಟಿಯಷ್ಟು ವಹಿವಾಟು ನಡೆದಿದ್ದು, ಹಲವು ಉದ್ಯಮಗಳಿಗೆ ಲಾಭವಾಗಿದೆ. ಕುಂಭದ ಅವಧಿಯಲ್ಲಿ ಹೊಟೆಲ್ ಉದ್ಯಮ 40 ಸಾವಿರ ಕೋಟಿ ರು., ಸಾರಿಗೆ ವಲಯ 1.5 ಲಕ್ಷ ಕೋಟಿ ರು., ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಮಾರುವವರು ಒಟ್ಟು 33 ಸಾವಿರ ಕೋಟಿ ರು., ಸಂಪಾದಿಸಿದರು. ಈ ಮೂಲಕ, 1 ಟ್ರಿಲಿಯನ್ ಡಾಲರ್(87 ಲಕ್ಷ ಕೋಟಿ ರು.) ಆರ್ಥಿಕತೆಯಾಗುವ ಉತ್ತರಪ್ರದೇಶದ ಕನಸಿಗೆ ಇನ್ನಷ್ಟು ವೇಗ ದೊರೆತಂತಾಗಿದೆ’ ಎಂದು ಸಿಎಂ ಯೋಗಿ ಹೇಳಿದ್ದಾರೆ.