ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ಮಹೋತ್ಸವಕ್ಕೆ ಆಹ್ವಾನ ಪತ್ರಿಕೆ ವಿವಾದ: ಅನ್ಯಧರ್ಮೀಯರ ಆಹ್ವಾನಕ್ಕೆ ಹಿಂದೂ ಸಂಘಟನೆಗಳ ತೀವ್ರ ವಿರೋಧ!

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ (Kukke Subrahmanya) ಇಂದಿನಿಂದ ನಡೆಯಲಿರುವ ಕಿರುಷಷ್ಠಿ ಮಹೋತ್ಸವಕ್ಕೆ ಅನ್ಯಧರ್ಮೀಯರನ್ನ ಆಹ್ವಾನಿಸಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.


ಹೌದು. ಇಂದಿನಿಂದ ಡಿ.26ರ ವರೆಗೆ ನಡೆಯಲಿರುವ ಕಿರುಷಷ್ಠಿ (Kiru Shashti) ಮಹೋತ್ಸವದ ಧರ್ಮಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಶಿಷ್ಟಾಚಾರದಂತೆ ಅನ್ಯಧರ್ಮೀಯರನ್ನೂ ಆಹ್ವಾನಿಸಲಾಗಿದೆ. ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರನ್ನ ಆಹ್ವಾನಿಸಿರೋದು ಸರಿಯಲ್ಲ, ತಕ್ಷಣ ಅದನ್ನ ತಡೆಯಬೇಕೆಂದು ಕ್ಷೇತ್ರ ಸಂರಕ್ಷಾ ವೇದಿಕೆಯಿಂದ ಕ್ಷೇತ್ರದ ಆಡಳಿತಾಧಿಕಾರಿಗೆ ಮನವಿ ನೀಡಲಾಗಿದೆ


ಆಹ್ವಾನ ವಾಪಸ್ ಪಡೆಯದೇ ಇದ್ದರೆ ಡಿ.22 ರಂದು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸೋ ಎಚ್ಚರಿಕೆ ನೀಡಲಾಗಿದೆ. ಕುಕ್ಕೆ ಕ್ಷೇತ್ರ ಮುಜರಾಯಿ ಇಲಾಖೆಯ ಅಧೀನದಲ್ಲಿರೋದ್ರಿಂದ ಸರ್ಕಾರದ ಶಿಷ್ಟಾಚಾರ ಪ್ರಕಾರ ಎಲ್ಲರನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಅನ್ಯಧರ್ಮಿಯರಾದ ಸ್ಪೀಕರ್ ಯು.ಟಿ.ಖಾದರ್, ಎಂಎಲ್ಸಿ ಐವನ್ ಡಿಸೋಜಾ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಕನಿಷ್ಠ ವೇತಾತ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಜೋಕಿಂ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಶಾಲೆಟ್ ಪಿಂಟೋಗೆ ಆಹ್ವಾನ ನೀಡಲಾಗಿದೆ.

ಇದು ಹಿಂದೂ ಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಆಹ್ವಾನ ನೀಡೋದು ಖಂಡನೀಯ ಅಂತಾ ಕ್ಷೇತ್ರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚಿದಾನಂದ ಕಂದಡ್ಕ ಮತ್ತು ಸದಸ್ಯರಿಂದ ದೂರು ನೀಡಲಾಗಿದೆ