ಕೋಲ್ಕತ್ತಾದ ರೆಸ್ಟೋರೆಂಟ್ ಬೆಂಕಿ ದುರಂತ:ಮೆಟ್ರೋನ ಎಲ್ಲಾ ರೂಫ್ಟಾಪ್ ಡೈನಿಂಗ್ ಮುಚ್ಚಲು ಕೆಎಂಸಿ ಆದೇಶ

ಕೋಲ್ಕತ್ತಾ:ನಗರದ ಎಲ್ಲಾ ಮೇಲ್ಛಾವಣಿ ರೆಸ್ಟೋರೆಂಟ್ಗಳನ್ನು ಮುಚ್ಚಲು ಕೋಲ್ಕತ್ತ ಮಹಾನಗರ ಪಾಲಿಕೆ (ಕೆಎಂಸಿ) ಶುಕ್ರವಾರ ಆದೇಶಿಸಿದೆ. ಇಲ್ಲಿನ ಹೋಟೆಲ್ವೊಂದರಲ್ಲಿ ಏಪ್ರಿಲ್ 29ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ 14 ಮಂದಿ ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದರು.
ಘಟನೆ ಬೆನ್ನನ್ನೇ ಈ ಆದೇಶ ಹೊರಡಿಸಲಾಗಿದೆ.
ಎಲ್ಲಾ ಮೇಲ್ಛಾವಣಿ ರೆಸ್ಟೋರೆಂಟ್ಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಕೆಎಂಸಿ ಮೇಯರ್ ಮತ್ತು ಪುರಸಭೆ ವ್ಯವಹಾರಗಳು ಮತ್ತು ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.
ಮೇಲ್ಛಾವಣಿ ರೆಸ್ಟೋರೆಂಟ್ಗಳನ್ನು ತಕ್ಷಣವೇ ಮುಚ್ಚಲು ಅಧಿಕಾರಿಗಳು ಬಲಪ್ರಯೋಗ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೇಲ್ಛಾವಣಿಯ ಮೇಲಿನ ರೆಸ್ಟೋರೆಂಟ್ಗಳನ್ನು ತಕ್ಷಣ ಮುಚ್ಚಲು ಮತ್ತು ಅಲ್ಲಿ ಸಾಮಗ್ರಿಗಳನ್ನು ಕಟ್ಟಡದ ಕೆಳಗಿನ ಮಹಡಿಗಳಿಗೆ ಅಥವಾ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲು ನಾವು ಅವರಿಗೆ ನೋಟಿಸ್ ನೀಡುತ್ತಿದ್ದೇವೆ. ಆದೇಶವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಿತುರಾಜ್ ಹೋಟೆಲ್ನಲ್ಲಿ ಏಪ್ರಿಲ್ 29ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ 14 ಮಂದಿ ಮೃತಪಟ್ಟು, 13 ಜನ ಗಾಯಗೊಂಡಿದ್ದರು. ಮೃತರಲ್ಲಿ 11 ಪುರುಷರು, ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.
ಭವಿಷ್ಯದಲ್ಲಿ ಇಂತಹ ಅಗ್ನಿ ಅವಘಡವು ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮಗಳನ್ನು ರೂಪಿಸಲು ಶೀಘ್ರದಲ್ಲೇ ಪುರಸಭೆ ಆಯುಕ್ತರು, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.
ದಕ್ಷಿಣ ಕೋಲ್ಕತ್ತದ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿರುವ ಮೇಲ್ಛಾವಣಿಯ ರೆಸ್ಟೋರೆಂಟ್ ಮುಚ್ಚುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಪ್ರಾಂತ್ಯದಲ್ಲಿ ಎಷ್ಟು ಮೇಲ್ಛಾವಣಿ ರೆಸ್ಟೋರೆಂಟ್ಗಳಿವೆ ಎಂಬುದರ ಕುರಿತು ಕೆಎಂಸಿ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.