ಕೋಟೆಕಾರ್ ಸಹಕಾರಿ ಸಂಘ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ಪೊಲೀಸ್ ವಶಕ್ಕೆ

ಉಳ್ಳಾಲ : ಕೋಟೆಕಾರು ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆ ದರೋಡೆಯ ಪ್ರಮುಖ ಕಿಂಗ್ ಪಿನ್ ಸಹಿತ ಸ್ಥಳೀಯ ಸೂತ್ರದಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿ ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ ( 69) ಮತ್ತು ಉಳ್ಳಾಲ ತಾಲೂಕು ತಲಪಾಡಿ ಕೆ.ಸಿ. ರೋಡ್ ಶಾಜ್ ಕಾಟೇಜ್ ನಿವಾಸಿ ಮಹಮ್ಮದ್ ನಝೀರ್ ಇದೀಗ ಬಂಧಿತರಾದ ಆರೋಪಿಗಳು.
ಇದರೊಂದಿಗೆ ಬಂಧಿತರ ಸಂಖ್ಯೆ 6 ಕ್ಕೇರಿದ್ದು, ಇನ್ನೂ ಮೂವರು ಆರೋಪಿಗಳು ಬಂಧನಕ್ಕೆ ಬಾಕಿ ಇದ್ದಾರೆ. ಪ್ರಮುಖ ಆರೋಪಿ ಭಾಸ್ಕರ್ ಬೆಳ್ಚಪ್ಪಾಡ ಯಾನೆ ಶಶಿ ತೇವರ್ ನನ್ನು ಬೆಂಗಳೂರಿನ ರೈಲು ನಿಲ್ದಾಣ ಬಳಿ ಫೆಬ್ರವರಿ 24 ರಂದು ವಶಕ್ಕೆ ಪಡೆದು ಆತನನ್ನು ವಿಚಾರಿಸಿದಾಗ ಆತನು ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಮಹಮ್ಮದ್ ನಝೀರ್ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಮಹಮ್ಮದ್ ನಝೀರ್ ಈ ಸಹಕಾರಿ ಸಂಘದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ ದರೋಡೆಗೆ ಸಹಕರಿಸಿದ್ದನು. ಆತನನ್ನು ಕೆ.ಸಿ.ರೋಡಿನ ಆತನ ಮನೆಯಿಂದ ಫೆಬ್ರವರಿ 25 ರಂದು ವಶಕ್ಕೆ ಪಡೆಯಲಾಗಿದೆ. ಕಳೆದ ಜನವರಿ 17 ರಂದು ಈ ದರೋಡೆ ಪ್ರಕರಣ ನಡೆದಿದ್ದು, ಇದೀಗ 39 ದಿನಗಳ ಬಳಿಕ ಪ್ರಮುಖ ಆರೋಪಿಯ ಬಂಧನವಾಗಿದೆ.
ಈ ದರೋಡೆ ಕೃತ್ಯವೆಸಗಲು ಆರು ತಿಂಗಳುಗಳಿಂದ ಇವರು ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಭಾಸ್ಕರ್ ಬೆಳ್ಚಪಾಡ ಸುಮಾರು 25 ವರ್ಷಗಳಿಂದ ಹುಟ್ಟೂರು ಬಂಟ್ವಾಳ ತಾಲೂಕಿನ ಕನ್ಯಾನವನ್ನು ಬಿಟ್ಟು ಮುಂಬಯಿನಲ್ಲಿ ವಾಸವಾಗಿದ್ದು ಆತನ ವಿರುದ್ದ ಬೇರೆ – ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. 2011 ರಲ್ಲಿ ಹೊಸ ದಿಲ್ಲಿಯಲ್ಲಿ ದರೋಡೆಗೆ ಯತ್ನ, 2021 ರಲ್ಲಿ ಮುಂಬಯಿ ಕ್ರೈಂ ಬ್ರಾಂಚ್ ಸಿ.ಐ.ಡಿ ಠಾಣಾ ವ್ಯಾಪ್ತಿಯಲ್ಲಿ ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ, 2022 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ಹಾಗೂ 2022 ರಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಪ್ರಯತ್ನ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿನಲ್ಲಿ ಸಕ್ರಿಯ ದರೋಡೆಕೋರರಾಗಿರುವ ಮುರುಗುಂಡಿ ಥೇವರ್ (36), ಯೋಸುವಾ ರಾಜೇಂದ್ರನ್ (35), ಕಣ್ಣನ್ ಮಣಿ(36) ಮತ್ತು ಮುರುಗುಂಡಿಯ ತಂದೆ ಷಣ್ಮುಗ ಸುಂದರಂ ನನ್ನು ಮಂಗಳೂರು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು