ತಮಿಳುನಾಡಿನಲ್ಲಿ ಬಾಲಕನ ಅಪಹರಣ ಯತ್ನ: ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ತಮಿಳುನಾಡು : 9ನೇ ತರಗತಿಯ ಬಾಲಕನನ್ನು ಅಪಹರಿಸಲು (Kidnap) ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ (Assam) ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಮಿಳುನಾಡಿನ (Tamilnadu) ದಿಂಡಿಗಲ್ನಲ್ಲಿ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನ ಕಾನು ಸರ್ಕಾರ್ ಎಂಬ ಆರೋಪಿ ಬಾಲಕನನ್ನು ಹಿಂಬಾಲಿಸಿ, ಕೈ ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ.ಬಾಲಕ ಸಹಾಯಕ್ಕಾಗಿ ಕೂಗಿಕೊಂಡಾಗ, ಸ್ಥಳೀಯರು ತಕ್ಷಣವೇ ಧಾವಿಸಿ, ಆ ವ್ಯಕ್ತಿಯನ್ನು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ನನಗೆ ಆ ವ್ಯಕ್ತಿಯ ಪರಿಚಯವಿಲ್ಲ. ಆತ ಇದ್ದಕ್ಕಿದ್ದಂತೆ ನನ್ನನ್ನು ಹಿಡಿದು, ಮುಖದ ಮೇಲೆ ಉಗುಳಿ ವಿಕೃತವಾಗಿ ವರ್ತಿಸಿ, ಗ್ರಾಮಸ್ಥರು ಮಧ್ಯಪ್ರವೇಶಿಸುವ ತನಕ ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿದನು ಎಂದು ಬಾಲಕ ಆರೋಪಿಸಿದ್ದಾನೆ. ಘಟನೆಯ ಬಗ್ಗೆ ಅಡಿವರಂ ಪೊಲೀಸರು ತನಿಖೆ ಆರಂಭಿಸಿದ್ದು, ಸರ್ಕಾರ್ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿಟಿವಿ ವೀಡಿಯೊದಲ್ಲಿ, ಆ ವ್ಯಕ್ತಿ ಮಗುವನ್ನು ಎಳೆದುಕೊಂಡು ಹೋಗಿ ಯತ್ನಿಸುತ್ತಿರುವುದು ಕಂಡುಬರುತ್ತದೆ.ಜುಲೈ 12 ರಂದು ಅರಂಬಕ್ಕಂನಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ತಿರುವಳ್ಳೂರು ಜಿಲ್ಲೆಯ ಪೊಲೀಸರು ಕಳೆದ ತಿಂಗಳು ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಿದ್ದರು. ಸುಲೂರ್ಪೇಟೆಯ ದಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ವ್ಯಕ್ತಿ, ಮಾವಿನ ತೋಟದ ಬಳಿ ಅಡ್ಡಾಡಿ, ಬಾಲಕಿ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ಅಪಹರಿಸಿದ್ದಾನೆ ದೌರ್ಜನ್ಯ ಎಸಗಿದ್ದ.
ಕೆರಳಿ ಕೆಂಡವಾದ ವಿಪಕ್ಷಗಳು :
ತಮಿಳುನಾಡಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಮತ್ತು ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಪ್ರಶ್ನೆಯನ್ನು ಎತ್ತುತ್ತಿರುವ ನಡುವೆಯೇ ಈ ರೀತಿಯ ಘಟನೆ ನಡೆದಿದೆ.
ತಮಿಳುನಾಡು ಪೊಲೀಸರು ಮತ್ತು ಆಡಳಿತಾರೂಢ ಡಿಎಂಕೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರೋದನ್ನು ಒಪ್ಪಿಕೊಳ್ಳುತ್ತಿಲ್ಲ. ಪ್ರತಿಯೊಂದು ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಮತ್ತು ವಿಚಾರಣೆಯನ್ನು ವೇಗವಾಗಿ ನಡೆಸಲಾಗಿದೆ ಪೊಲೀಸರು ಹಾಗೂ ಸರ್ಕಾರ ಹೇಳಿದೆ. ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಚಲಿಸುವ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಎರಡರಲ್ಲೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ನಾವೇ ಕಾರಣ ಎಂದು ಸರ್ಕಾರ ಹೇಳುತ್ತಿದೆ.
ದೇಶವನ್ನೇ ಬೆಚ್ಚಿಬೀಳಿಸಿದ್ದ ಅಣ್ಣಾ ವಿವಿ ಕೇಸ್
ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣವು ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಸಂತ್ರಸ್ತ ವಿದ್ಯಾರ್ಥಿನಿ ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಸಿಗ್ನಲ್ಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿ ಜ್ಞಾನಶೇಖರನ್ ನನ್ನು ಡಿಸೆಂಬರ್ 26 ರಂದು ಬಂಧಿಸಿದ್ದರು.
ಈ ಘಟನೆ ನಡೆದ ದಿನ ಅಣ್ಣಾ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ್ದು ಜ್ಞಾನಶೇಖರನ್ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೆಳಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದ ಎಂದು ಪೊಲೀಸರು ಚಾರ್ಜ್ ಶೀಟ್ನಲ್ಲಿ ಆರೋಪಿಸಿದ್ದರು. ತಮಿಳುನಾಡು ಸರ್ಕಾರವು ಜ್ಞಾನಶೇಖರನ್ ವಿಚಾರಣೆ ನಡೆಸಲು 3 ಮಹಿಳಾ ಐಪಿಎಸ್ ಅಧಿಕಾರಿಗಳ ತಂಡವನ್ನು ರಚಿಸಿತ್ತು. ತನಿಖಾ ತಂಡವು ವಿಚಾರಣೆ ನಡೆಸಿ ಚೆನ್ನೈ ಮಹಿಳಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜ್ಞಾನಶೇಖರನ್ ಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.