ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಕಾರ್ಯಕರ್ತರ ದಾಳಿ

ಕೆನಡಾ :ಕೆನಡಾ ಏಪ್ರಿಲ್ 28 ರಂದು ನಡೆಯಲಿರುವ ನಿರ್ಣಾಯಕ ಫೆಡರಲ್ ಚುನಾವಣೆಗೆ ಸಜ್ಜಾಗುತ್ತಿದ್ದು, ಭಾರತೀಯ ಮೂಲದ ಗಮನಾರ್ಹ ಸಂಖ್ಯೆಯ ಅಭ್ಯರ್ಥಿಗಳು ದೇಶದ ಸಂಸತ್ತಿನ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಇದರ ನಡುವೆಯೇ ಭಾರತೀಯ ವಲಸೆ ಮತ್ತು ಇಂಡೋ-ಕೆನಡಾ ಸಂಬಂಧಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಶನಿವಾರವಷ್ಟೇ ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಕಾರ್ಯಕರ್ತರು ದಾಳಿ ನಡೆಸಿ ದೇವಸ್ಥಾನವನ್ನು ಸಂಪೂರ್ಣವಾಗಿ ದ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಭಾರತ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ.
ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಬರಹಗಳೊಂದಿಗೆ ಗುರುದ್ವಾರ ಮತ್ತು ದೇವಾಲಯವನ್ನು ಧ್ವಂಸಗೊಳಿಸಿದ್ದು, ಜೊತೆಗೆ ಖಾಲ್ಸಾ ಪೆರೇಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ವಾಂಟೆಡ್ ಪೋಸ್ಟರ್ಗಳನ್ನು ಮೆರವಣಿಗೆ ಮಾಡಲಾಯಿತು.
ಅಷ್ಟೇ ಅಲ್ಲದೆ ಭಾರತೀಯರು ಆದಷ್ಟು ಬೇಗ ತಮ್ಮ ದೇಶಕ್ಕೆ ಹಿಂತಿರುಗಿ ಎಂದು ಖಲಿಸ್ತಾನ್ ಪರ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ 5,50,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಏರ್ ಇಂಡಿಯಾ ಬಾಂಬ್ ಸ್ಫೋಟದ ಮಾಸ್ಟರ್ಮೈಂಡ್ ಆಪಾದಿತನ ವೈಭವೀಕರಣದ ನಡುವೆ ಖಲಿಸ್ತಾನಿ ಮತ್ತು ಭಾರತ ವಿರೋಧಿ ಭಾವನೆಗಳ ಬಹಿರಂಗ ಪ್ರದರ್ಶನವನ್ನು ಹಲವರು ಟೀಕಿಸಿದ್ದಾರೆ.