ಕೇರಳ 10ನೇ ತರಗತಿ ವಿದ್ಯಾರ್ಥಿ ಕೊಲೆ ಪ್ರಕರಣ; ಸಹಪಾಠಿಗಳಿಂದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ನಡೆದಿತ್ತು ಸಂಚು.

ಕೋಯಿಕ್ಕೋಡ್: ಇಲ್ಲಿನ ತಾಮರಸ್ಸೆರಿಯಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟ ಹಾಗೂ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗಲಾಟೆಯಲ್ಲಿ ಮೃತಪಟ್ಟ 10ನೇ ತರಗತಿ ಬಾಲಕನ ಮೇಲಿನ ಹಲ್ಲೆಗೆ ವ್ಯವಸ್ಥಿತವಾದ ಸಂಚು ನಡೆದಿತ್ತು ಎಂಬುದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳು ಈ ಹಲ್ಲೆಗೆ ಮುನ್ನ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ಅದರಲ್ಲಿ ಈ ಬಗ್ಗೆ ಚರ್ಚಿಸಿ ಮೊದಲೇ ಪ್ಲಾನ್ ರೂಪಿಸಿಕೊಂಡಿದ್ದರು ಎಂದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಇದೊಂದು ಪೂರ್ವಯೋಚಿತ ಕೃತ್ಯವಾಗಿದೆ. ಇನ್ನು ಈ ಕೃತ್ಯಕ್ಕೆ ಮುಂದಾಗಿರುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಕುರಿತು ಕೂಡ ಕೂಲಂಕಷ ಪರಿಶೀಲನೆ ನಡೆಸಬೇಕಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳ ಮನೆ ಪರಿಶೀಲಿಸಿದಾಗ ಅಲ್ಲಿ ಶಸ್ತ್ರಾಸ್ತ್ರಗಳು ಕಂಡು ಬಂದಿವೆ. ಅವುಗಳನ್ನು ಇದೀಗ ವಶಕ್ಕೆ ಪಡೆಯಲಾಗಿದ್ದು, ವಿದ್ಯಾರ್ಥಿಗಳ ಮೊಬೈಲ್ ಫೋನ್, ವಾಟ್ಸ್ಆ್ಯಪ್ ಗ್ರೂಪ್ ಮತ್ತು ಇನ್ಸ್ಟಾ ಖಾತೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದರ ಜೊತೆಗೆ ಪೊಲೀಸರು ಈ ಕೃತ್ಯದಲ್ಲಿ ಯಾರಾದರೂ ವಯಸ್ಕರ ಪಾತ್ರ ಇದೆಯಾ ಎಂಬ ಕುರಿತು ಕೂಡ ತನಿಖೆ ಸಾಗುತ್ತಿದೆ ಎಂದರು.
ಮೃತ ಬಾಲಕನ ತಂದೆಯ ಕಳವಳವಿದು: ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿದ್ಯಾರ್ಥಿಯ ತಂದೆ, ಗ್ಯಾಂಗ್ ಮತ್ತು ಸ್ಮಗ್ಲಿಂಗ್ ನೆಟ್ವರ್ಕ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿರುವ ಬೆನ್ನಲ್ಲೇ ಪೊಲೀಸರು ಈ ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಆರೋಪಿತ ಐವರು ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಜ್ಯುವೆನಿಲ್ ಹೋಮ್ನಲ್ಲಿ ಅವಕಾಶ ನೀಡಿರುವ ನಿರ್ಧಾರ ಕುರಿತು ಮೃತ ವಿದ್ಯಾರ್ಥಿ ತಂದೆ ಇಕ್ಬಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಹಿಂಸಾಚಾರಕ್ಕೆ ಪ್ರೇರೆಪಿಸುವಂತೆ ಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

’ಕೊಲೆ ಆರೋಪಿ ವಿದ್ಯಾರ್ಥಿಗಳಿಗೆ ಈ ಬಾರಿ ಅವಕಾಶ ನೀಡಬಾರದಿತ್ತು’: ವಿದ್ಯಾರ್ಥಿಗಳಿಗೆ ಈ ವರ್ಷದ ಬದಲಾಗಿ ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕು. ಇದೇ ವರ್ಷ ಅಪರಾಧ ಕೃತ್ಯದ ಬೆನ್ನಲ್ಲೇ ಅವರಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡಿರುವುದರಿಂದ ಅವರಿಗೆ ಏನು ಮಾಡಿದ್ದೇವೆ ಎಂಬ ಅರಿವು ಇರುವುದಿಲ್ಲ. ಅವರಿಗೆ ನೈಜ ಪರಿಣಾಮ ಬೀರುವುದಿಲ್ಲ ಎಂದು ಮೃತ ಬಾಲಕನ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ವಿದ್ಯಾರ್ಥಿಗಳಿಗೆ ತಾಮರೆಸ್ಸೆರಿಯಲ್ಲಿನ ಶಾಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ನಿರ್ಧಾರವನ್ನು ಕೆಎಸ್ಯು, ಯೂಥ್ ಕಾಂಗ್ರೆಸ್ ಮತ್ತು ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ವಿರೋಧಿಸಿದರು. ಪರಿಣಾಮ ವೆಲ್ಲಿಮದುಕುನ್ನು ಹತ್ತಿರದ ಬಾಲ ಮಂದಿರದಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ಏನಿದು ಘಟನೆ?: ಶನಿವಾರ ತಾಮರೆಸ್ಸೆಯಿಯ ಖಾಸಗಿ ಟ್ಯೂಷನ್ ಕೇಂದ್ರದಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿತ್ತು. ಘಟನೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶಹಬಸ್ ಮೇಲೆ ಗಂಭೀರ ಹಲ್ಲೆ ನಡೆಸಲಾಗಿತ್ತು. ಆತನ್ನು ಕೋಯಿಕ್ಕೋಡ್ನ ವೈದ್ಯಕೀಯ ಆಸ್ಪತ್ರೆಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ, ಆ ದಿನ ಮಧ್ಯಾಹ್ನ 1ರ ಸುಮಾರಿಗೆ ಆತ ಸಾವನ್ನಪ್ಪಿದ.
ಈ ಪ್ರಕರಣದಲ್ಲಿ ಸಂಬಂಧ ಹೊಂದಿದ್ದ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿತ್ತು.